ಬೆಂಗಳೂರು: ಕಳೆದ 5 ದಿನದಿಂದ ಕೊರೊನಾ ಲಸಿಕೆ ನೀಡಲು ಪ್ರಾರಂಭ ಮಾಡಲಾಗಿದೆ. ಇಲ್ಲಿಯವರೆಗೆ ಒಟ್ಟು 1,38,656 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಮಾಹಿತಿ ನೀಡಿದ್ದಾರೆ.
ಕೊರೊನಾ ಲಸಿಕೆ ನೀಡಿರುವ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೋವಿಶೀಲ್ಡ್ ಲಸಿಕೆಯನ್ನು 1,36,882, ಜನರಿಗೆ ನೀಡಲಾಗಿದೆ. ಹಾಗೂ ಕೋವ್ಯಾಕ್ಸಿನ್ 1774 ಜನರಿಗೆ ನೀಡಲಾಗಿದೆ. ಇದರಲ್ಲಿ ಶೇ.2 ರಿಂದ 3.5ಜನರಿಗೆ ಸ್ವಲ್ಪ ಅಡ್ಡ ಪರಿಣಾಮ ಆಗಿದೆ. ಅರ್ಧ ದಿನದಲ್ಲಿ ಅದು ಸಹ ನಿವಾರಣೆಯಾಗಿದೆ ಎಂದಿದ್ದಾರೆ.
ರಾಜ್ಯದಲ್ಲಿ ಇಲ್ಲಿಯವರೆಗೆ ಲಸಿಕೆ ಪಡೆದವರಲ್ಲಿ ಯಾರು ಕೂಡ ಮರಣ ಹೊಂದಿಲ್ಲ. ಇಲ್ಲಿಯವರೆಗೆ ಲಸಿಕೆ ಪಡೆಯಲು ನೊಂದಣಿಯಾಗಿರುವವರು ಸಂಖ್ಯೆ 8,47,908. ಕೊವ್ಯಾಕ್ಸಿನ್ 1,46,240 ಡೋಸ್ ಇಂದು ರಾಜ್ಯಕ್ಕೆ ಬರಲಿದೆ. ಲಸಿಕೆ ಹಾಕಲು 909 ಸೈಟ್ ಗುರುತಿಸಲಾಗಿದೆ. ಇಂದು ಕೂಡ ಲಸಿಕೆ ಕೊಡಲಾಗುತ್ತಿದೆ ಎಂದಿದ್ದಾರೆ.
ಲಸಿಕೆಗೆ ಹೆದರಬೇಡಿ, ಕೋವಿಡ್ಗೆ ಹೆದರಬೇಕು. ತಪ್ಪು ಮಾಹಿತಿಗೆ ಕಿವಿಗೊಡಬೇಡಿ. ವ್ಯಾಕ್ಸಿನ್ ಗೆ ಭಯ ಬೀಳಬೇಡಿ, ತಾವೆಲ್ಲ ಲಸಿಕೆ ಪಡೆಯಿರಿ. ಎರಡನೇ ಅಲೆ ಬರುವ ಮುನ್ನವೇ ಸುರಕ್ಷಿತವಾಗಿರಿ. ಎರಡನೇ ಹಂತದ ಲಸಿಕೆ ಕೂಡ ಆದಷ್ಟು ಬೇಗ ರಾಜ್ಯಕ್ಕೆ ಬರಲಿದೆ. ಹೀಗಾಗಿ ದೊಡ್ಡ ಸಿದ್ಧತೆಗಳು ಆಗಬೇಕಿದೆ. ಎರಡು ಕೋಟಿ ಜನರಿಗೆ ಎರಡನೇ ಹಂತದಲ್ಲಿ ಲಸಿಕೆ ನೀಡಬೇಕಾಗಿದೆ ಎಂದು ತಿಳಿಸಿದ್ದಾರೆ.