ವಿಜಯಪುರ: ವ್ಯಾಕ್ಸಿನ್ ಹಾಕಿಸಿಕೊಳ್ಳದ ಆಟೋ ಚಾಲಕರು ಆಟೋಗಳನ್ನ ರಸ್ತೆಗೆ ಇಳಿಸುವ ಹಾಗಿಲ್ಲ. ಇನ್ನು ಈವರೆಗೂ ವ್ಯಾಕ್ಸಿನ್ ಪಡೆಯದ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುವ ಹಾಗಿಲ್ಲ ಎಂದು ವಿಜಯಪುರ ಜಿಲ್ಲಾಧಿಕಾರಿ ಪಿ ಸುನೀಲ್ಕುಮಾರ್ ಖಡಕ್ ನಿರ್ಧಾರಕ್ಕೆ ಮುಂದಾಗಿದ್ದಾರೆ.
ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದು ಎಷ್ಟೇ ಹೇಳಿದರೂ, ಆಟೋ ಚಾಲಕರು, ಬೀದಿ ಬದಿ ವ್ಯಾಪಾರಸ್ಥರು, ಕಟ್ಟಡ ಕಾರ್ಮಿಕರು ಕೇಳುತ್ತಿಲ್ಲ. ನಾವು ಆರೋಗ್ಯವಾಗಿದ್ದೀವಿ ವ್ಯಾಕ್ಸಿನ್ ಯಾಕೆ ಎಂದು ಹೇಳುತ್ತಿದ್ದಾರೆ.
ಹೀಗಾಗಿ ಗರಂ ಆಗಿರುವ ಡಿಸಿ ಸುನೀಲ್ಕುಮಾರ್, ವ್ಯಾಕ್ಸಿನ್ ಹಾಕಿಸಿಕೊಂಡರೇ ಮಾತ್ರ ಆಟೋ ಓಡಿಸಬೇಕು. ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡಬಹುದು. ಇಲ್ಲದಿದ್ದರೆ ಪಾಲಿಕೆ ವ್ಯಾಕ್ಸಿನ್ ಹಾಕಿಸಿಕೊಳ್ಳದವರಿಗೆ ವ್ಯಾಪಾರಕ್ಕೆ ಅವಕಾಶ ಕೊಡಲೇ ಬಾರದು ಎಂದು ಆದೇಶಿಸಿದ್ದಾರೆ.
ವಿಜಯಪುರದಲ್ಲಿ 6 ಸಾವಿರದಷ್ಟು ಬೀದಿಬದಿ ವ್ಯಾಪಾರಿಗಳಿದ್ದಾರೆ, ಆದರೆ, ಅರ್ಧದಷ್ಟು ಜನರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ. 75 ಸಾವಿರ ಕಟ್ಟಡ ಕಾರ್ಮಿಕರಿದ್ದು, ಅವರು ಕೂಡ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಎಂದು ಡಿಸಿ ಸುನೀಲ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಕೋಟೆನಾಡಲ್ಲಿ ಬಂದ್ ಆಗಿದ್ದ ಪ್ರವಾಸಿ ತಾಣಗಳು ಓಪನ್