– ಸೋಂಕಿತರ ಅಂತ್ಯ ಸಂಸ್ಕಾರಕ್ಕಾಗಿ ತಂಡ ಕಟ್ಟುತ್ತೇನೆ
– ಹೆಣ ಉಗುಳೋದು ಇಲ್ಲ, ಸೀನೋದು ಇಲ್ಲ
ಚಿಕ್ಕಮಗಳೂರು: ಹೆಣ ಉಗಿಯೋಕು ಸಾಧ್ಯವಿಲ್ಲ, ಸೀನೋಕು ಸಾಧ್ಯವಿಲ್ಲ. ಆದರೆ ಮೃತದೇಹಗಳಿಗೆ ಗೌರವಯುತವಾದ ಅಂತ್ಯಸಂಸ್ಕಾರವನ್ನು ಮಾಡದಂತ ಭೀತಿ ಸೃಷ್ಟಿಸಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರೆ.
ಕೊರೊನಾ ಪಾಸಿಟಿವ್ ದೃಢಪಟ್ಟ ಮೇಲೆ 19 ದಿನಗಳ ಕಾಲ ತಮ್ಮ ಫಾರಂ ಹೌಸ್ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ಸಚಿವ ಸಿ.ಟಿ.ರವಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದರು. ಕೊರೊನಾಗೆ ಯಾರೂ ಭಯಪಡಬೇಡಿ, ಕೊರೊನಾ ಬಂದಾಗ ಪ್ರೀತಿ ಇರಲಿ, ಭೀತಿ ಬೇಡ ಎಂದರು. ಹೆಣ ಉಗಿಯೋಕು ಸಾಧ್ಯವಿಲ್ಲ, ಸೀನೋಕು ಸಾಧ್ಯವಿಲ್ಲ. ಆದರೆ ಮೃತದೇಹಗಳಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡದಂತ ಭೀತಿ ಸೃಷ್ಟಿಸಿದ್ದೇವೆ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.
ಹೆಣ ನೇರವಾಗಿ ಯಾರಿಗೂ ತೊಂದರೆ ಮಾಡಲ್ಲ. ಹೆಣ ಮುಟ್ಟಿದವರು ಮೂಗು, ಕಣ್ಣು, ಬಾಯಿ ಮುಟ್ಟಿಕೊಂಡರೆ ಸೋಂಕು ತಗುಲಬಹುದೋ ವಿನಃ, ಹೆಣವೇ ಎದ್ದು ಬಂದು ಅವರ ಕೈ-ಬಾಯಿ-ಮೂಗು ಮುಟ್ಟುವುದಿಲ್ಲ ಎಂದರು. ಸತ್ತವರಿಗೆ ಗೌರವಯುತವಾದ ಅಂತ್ಯ ಸಂಸ್ಕಾರ ಮಾಡಲು ಭೀತಿಯ ಅವಶ್ಯಕತೆ ಇಲ್ಲ. ಅದಕ್ಕಾಗಿ ತಂಡ ರಚನೆ ಮಾಡುತ್ತೇವೆ. ಅದರ ನೇತೃತ್ವ ನನ್ನದೆ. ಅದಕ್ಕೆ ಬೇಕಿರುವ ತಂಡವನ್ನು ನಮ್ಮ ಜಿಲ್ಲೆಯಲ್ಲಿ ರಚನೆ ಮಾಡಿ, ತೊಂದರೆಯಾದರೆ ನಾವೇ ಮುಂದೆ ನಿಂತು ಅವರವರ ನಂಬಿಕೆ ಪ್ರಕಾರ ಅಂತ್ಯಸಂಸ್ಕಾರ ಮಾಡಿಸುತ್ತೇವೆ ಎಂದಿದ್ದಾರೆ.
ಇದೇ ವೇಳೆ ಸೀಲ್ಡೌನ್ ಬಗ್ಗೆ ಮಾತನಾಡಿದ ಸಚಿವ ಸಿ.ಟಿರವಿ, ವೈರಸ್ ಒಂದೆರಡು ಮೀಟರ್ ಕ್ರಮಿಸಬಹುದೋ ವಿನಾ: ನೂರಾರು ಮೀಟರ್ ಅಲ್ಲ. ಆದ್ದರಿಂದ ನೂರು ಮೀಟರ್ ಸೀಲ್ಡೌನ್ ಬಗ್ಗೆ ಪರಿಶೀಲನೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ. ವೈರಸ್ ನಿರ್ಜೀವ ವಸ್ತುವಿನ ಮೇಲೆ ಏಳರಿಂದ ಎಂಟು ಗಂಟೆ ಮಾತ್ರ ಇರುತ್ತೆ. ಹಾಗಾಗಿ ವಾರಗಟ್ಟಲೇ ಸೀಲ್ಡೌನ್ ಬಗ್ಗೆ ಪರಿಶೀಲಿಸಬೇಕಾಗಿದೆ. ಮೊದಲು 500 ಮೀಟರ್ ಸೀಲ್ಡೌನ್ ಮಾಡುತ್ತಿದ್ದರು. ಈಗ 100 ಮೀಟರ್ ಮಾಡುತ್ತಿದ್ದಾರೆ. ಅದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದೇನೆ ಎಂದರು.