ಮಡಿಕೇರಿ: ಹಳೇ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕೊಡಗು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ಅತನ ಸ್ನೇಹಿತ ಕಿರಣ್ ಜೊತೆ ಸೇರಿ ವ್ಯಕ್ತಿಯೊರ್ವನ ಕಾರು ಅಡ್ಡಗಟ್ಟಿ ಗಾಜು ಹೊಡೆದು ಹಲ್ಲೆ ಮಾಡಿರುವ ಘಟನೆ ಸೋಮವಾರಪೇಟೆ ತಾಲೂಕಿನ ಹಾನಗಲ್ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ವ್ಯಕ್ತಿಯನ್ನು ಸಂಪತ್ ಎಂದು ಗುರುತಿಸಲಾಗಿದೆ. ಸಂಪತ್ ಎಂಬುವವರು ಕಾರಿನಲ್ಲಿ ಹೋಗುವ ಸಂದರ್ಭದಲ್ಲಿ ಮಿಥುನ್ ಹಾಗೂ ಅವರ ಸ್ನೇಹಿತರು ಕಾರು ಅಡ್ಟಗಟ್ಟಿ ಕಾರಿನ ಗಾಜುಗಳನ್ನು ಒಡೆದು ಸಂಪತ್ ಅವರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ.
ಮಿಥುನ್ ಕಾರಿನ ಮೇಲೆ ಹಲ್ಲೆ ಮಾಡುತ್ತಿದ್ದಂತೆ ಕಾರಿನ ಒಳಭಾಗದಲ್ಲಿದ್ದ ಸಂಪತ್ ಅವರು ಮೊಬೈಲ್ನಲ್ಲಿ ವೀಡಿಯೋ ಮಾಡಲು ಮುಂದಾಗಿದ್ದಾರೆ ಈ ವೇಳೆ ಸಂಪತ್ ಅವರನ್ನು ಮಿಥುನ್ ಕಾರಿನಿಂದ ಎಳೆದು ಹಾಕಿ ಹಲ್ಲೆ ಮಾಡಿದ್ದಾರೆ.
ಹಳೇ ವೈಯಕ್ತಿಕ ದ್ವೇಷದಿಂದ ಮಿಥುನ್ ಸಂಪತ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದ್ದು, ಹಲ್ಲೆ ವೇಳೆ ಸಂಪತ್ ಅವರ ಬಲಗೈಯ ಹೆಬ್ಬೆರಳಿಗೆ ಗಾಯವಾಗಿದೆ. ಕೂಡಲೇ ಸ್ಥಳೀಯರು ಸೋಮವಾರಪೇಟೆ ಆಸ್ಪತ್ರೆಯಲ್ಲಿ ದಾಖಲು ಮಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.