– ಭಯಾನಕ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ
ಬೆಂಗಳೂರು: ವೇಗವಾಗಿ ಬಂದ ಕ್ರೇನ್ ಚಾಲಕನ ನಿಯಂತ್ರಣ ತಪ್ಪಿ ಆಟೋ, ಓಮಿನಿ ಹಾಗೂ ಕಾರಿಗೆ ಡಿಕ್ಕಿಯಾಗಿ ಓರ್ವ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸುಂಕದಕಟ್ಟೆಯಲ್ಲಿ ನಡೆದಿದೆ.
ಮುನಿಯಪ್ಪ ಸಾವನ್ನಪ್ಪಿದ್ದ ವ್ಯಕ್ತಿ. ಬ್ರೇಕ್ ಫೇಲ್ ಆದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಈ ಭಯಾನಕ ಅಪಘಾತದ ದೃಶ್ಯ ಘಟನಾ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬ್ರೇಕ್ ಫೇಲ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಕ್ರೇನ್ ರಸ್ತೆ ಪಕ್ಕದಲ್ಲೇ ನಿಂತಿದ್ದ ಓಮಿನಿ, ಕಾರಿಗೆ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲದೆ ಭಾರೀ ವೇಗವಾಗಿದ್ದರಿಂದ ಮುಂದಿನ ಅಡ್ಡ ರಸ್ತೆಯಲ್ಲಿ ಬರುತ್ತಿದ್ದ ಆಟೋಗೂ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಎಲ್ಲ ಮೂರೂ ವಾಹನಗಳು ನಜ್ಜುಗುಜ್ಜಾಗಿವೆ.
ಆಟೋ ಮತ್ತು ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿದ್ದ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.