ಮಡಿಕೇರಿ: ಕೋಟ್ಯಂತರ ರೂಪಾಯಿಯ ಆಸ್ತಿ ಇದ್ದರೂ ಇತ್ತೀಚಿನ ದಿನಗಳಲ್ಲಿ ದಾನ ನೀಡುವವರ ಸಂಖ್ಯೆ ತೀರಾ ವಿರಳ. ಆದರೆ ಇಳಿ ವಯಸ್ಸಿನ ವೃದ್ಧೆ ಲಕ್ಷಾಂತರ ರೂ. ಬೆಲೆ ಬಾಳುವ ತಮ್ಮ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್ ಅನಾಥಶ್ರಮಕ್ಕೆ ದಾನ ನೀಡಿ ಮಾದರಿಯಾಗಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆಯ ನಿವಾಸಿ ಬೋಳ್ಳಮ್ಮ (82) ಅವರು ತಮಗೆ ಇರುವ ಅಲ್ಪಸ್ವಲ್ಪ ಆಸ್ತಿಯಲ್ಲಿ 30 ಸೆಂಟ್ ಜಾಗವನ್ನು ವಿಕಾಸ್ ಜನ ಸೇವಾ ಟ್ರಸ್ಟ್ ಅನಾಥಾಶ್ರಮಕ್ಕೆ ದಾನವಾಗಿ ನೀಡಿದ್ದಾರೆ. ಸುಂಟಿಕೊಪ್ಪ ಸಮೀಪ ಇರುವ ಅಶ್ರಮದ ಮಾಲೀಕ ರಮೇಶ್ ಅವರು ಸರ್ಕಾರ ಯಾವುದೇ ಯೋಜನೆಯ ಸಹಾಯ ಪಡೆಯದೆ, ಬಾಡಿಗೆ ಮನೆ ಮಾಡಿಕೊಂಡು ಪ್ರಸ್ತುತ 28 ಅನಾಥರಿಗೆ ಆಶ್ರಯ ನೀಡಿದ್ದಾರೆ.
ಸಂಕಷ್ಟದಲ್ಲಿ ಆಶ್ರಮ ನಡೆಸುತ್ತಿರುವುದನ್ನು ಗಮನಿಸಿದ ವೃದ್ಧೆ, ತಮಗೆ ಇರುವ ಸ್ವಲ್ಪ ಜಾಗವನ್ನೇ ಅನಾಥಶ್ರಮಕ್ಕೆ ದಾನ ನೀಡಿ ಮಾನವೀಯತೆ ಮೇರೆದಿದ್ದಾರೆ. ಇಂದು ನಾಗರಪಂಚಮಿ ಹಬ್ಬ ಆಗಿರುವುದರಿಂದ ಶಾಸಕ ಅಪ್ಪಚ್ಚು ರಂಜನ್ ಮೂಲಕ ಜಾಗ ದಾನದ ಪತ್ರವನ್ನು ನೀಡಿದರು. ಇದೇ ಸಂದರ್ಭದಲ್ಲಿ ಮಾತಾನಾಡಿದ ಶಾಸಕ ಅಪ್ಪಚ್ಚು ರಂಜನ್, ಅನಾಥಾಶ್ರಮಕ್ಕೆ ಇನ್ನಷ್ಟು ಜಾಗದ ಅವಶ್ಯಕತೆ ಇರುವುದರಿಂದ ವಯಕ್ತಿಕವಾಗಿ ಇನ್ನೂ 70 ಸೆಂಟ್ ಜಾಗ ಖರೀದಿಸಿ, ಒಟ್ಟು ಒಂದು ಎಕರೆ ಜಾಗದಲ್ಲಿ ಒಳ್ಳೆಯ ಅಶ್ರಮ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದ್ದಾರೆ.