ತುಮಕೂರು: ರಾಸಾಯನಿಕ ಮಿಶ್ರಿತ ವಿಷಯುಕ್ತ ನೀರು ಸೇವಿಸಿ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತುಮಕೂರಿಗೆ ಹತ್ತಿರವಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಶಿರಾ ತಾಲೂಕಿನ ತರೂರು ಗ್ರಾಮದ ಶಿವಣ್ಣ ಸಿದ್ದಗಂಗಯ್ಯ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ವಸಂತ ನರಸಾಪುರದ ಕೈಗಾರಿಕೆಗಳ ವಿಷಯುಕ್ತ ರಾಸಾಯನಿಕ ತ್ಯಾಜ್ಯವನ್ನು ಇಲ್ಲಿಯ ಗುಂಡಿಗೆ ಬಿಡಲಾಗಿತ್ತು. ಅದನ್ನು ಕುಡಿದ ಕುರಿಗಳು ಸಾವನಪ್ಪಿವೆ ಎಂದು ರೈತರ ಆರೋಪಿಸಿದ್ದಾರೆ.
ಕೈಗಾರಿಕೆಗಳ ವಿರುದ್ಧ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ವಸಂತ ನರಸಾಪುರದ ಕೈಗಾರಿಕೆಗಳಿ ತ್ಯಾಜ್ಯವನ್ನು ಶುದ್ದೀಕರಿಸದೇ ನೇರವಾಗಿ ಗುಂಡಿ, ಕೆರೆಕಟ್ಟೆಗಳಿಗೆ ಬಿಡುತ್ತಿದೆ. ಅದನ್ನು ಸೇವಿಸಿದ ಜಾನುವಾರುಗಳು ಸಾಯುತ್ತಿವೆ. ಇದನ್ನು ತಡೆಗಟ್ಟಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಕೈ ಕಟ್ಟಿ ಕುಳಿತಿದೆ ಎಂದು ರೈತರು ಕಿಡಿಕಾರಿದ್ದಾರೆ. ಈ ಸಂಬಂಧ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.