ಉಡುಪಿ: ವಿಶ್ವ ಪರಿಸರ ದಿನದಂದು ಉಡುಪಿಯಲ್ಲಿ ಮರಗಳ ಮಾರಣಹೋಮ ನಡೆದಿದೆ. ಈ ದಿನ ಗಿಡ ನೆಡದಿದ್ರೂ ಪರವಾಗಿಲ್ಲ ಯಾವುದೇ ಮಾನವೀಯತೆ ಇಲ್ಲದೆ 50- 60 ವರ್ಷ ಬೆಳೆದಿದ್ದ ಮರಗಳನ್ನು ಕತ್ತರಿಸಿ ಬಿಸಾಕಿದ್ದಾರೆ.
ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಬನ್ನಂಜೆಯಲ್ಲಿ ನೂತನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ನಿರ್ಮಾಣ ಆಗ್ತಾಯಿದೆ. ಜೊತೆ ಜೊತೆಗೆ ಕಾಂಪೌಡ್ ಸುತ್ತ ಇರುವ ಹತ್ತಾರು ಮರಗಳ ನಿರ್ನಾಮ ಆಗ್ತಾಯಿದೆ. ಅದೂ ವಿಶ್ವ ಪರಿಸರ ದಿನ ಎಂಬ ಸಾಮಾನ್ಯ ಜ್ಞಾನ ಇಲ್ಲದೆ ಟೆಂಡರ್ ಆದವರು ಮರ ಕಡಿದಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಈ ಬಗ್ಗೆ ಚಕಾರ ಎತ್ತಿಲ್ಲ.
ಇದೇ ಹೊತ್ತಲ್ಲಿ ಇಂದು ಬೆಳಗ್ಗಿನ ಜಾವ ಅರಣ್ಯ ರಕ್ಷಕರು ನಾಲ್ಕಾರು ಗಿಡ ನೆಟ್ಟು ಕೈ ತೊಳೆದುಕೊಂಡಿದ್ದಾರೆ. ಈ ಮೂಲಕ ‘ಅರ್ಥಗರ್ಭಿತ’ ವಿಶ್ವ ಪರಿಸರ ದಿನ ಆಚರಿಸಿದ್ದಾರೆ. ಮರಗಳನ್ನು ಬೇರೆಡೆ ಶಿಫ್ಟ್ ಮಾಡುತ್ತೇವೆ ಎಂದು ಅಂದು ಭರವಸೆ ಕೊಟ್ಟಿದ್ದು ಪೊಳ್ಳು ಎಂಬುದು ಇಂದು ಸಾಬೀತಾಗಿದೆ. ಕತ್ತರಿಸಿದ ಮರಗಳ ಸಂಖ್ಯೆಯ ಮೂರರಷ್ಟು ಗಿಡ ನೆಡುತ್ತೇವೆ ಎಂದು ಅಂದು ಅಧಿಕಾರಿಗಳು ಹೇಳಿದ್ದರು. ಗಿಡ ನೆಡೋದ್ಯಾವಾಗ, ಅದು ಮರವಾಗಿ ಬೆಳೆಯೋದ್ಯಾವಾಗ ಎಂದು ಪರಿಸರ ತಜ್ಞರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪರಿಸರ ಪ್ರೇಮಿ ಪ್ರೇಮಾನಂದ ಕಲ್ಮಾಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಕಾಂಕ್ರೀಟ್ ಕಾಡಿಗೆ ಅಡ್ಡ ಆಗುವಾಗ ನೈಸರ್ಗಿಕ ಕಾಡಿಗೆ ಕೊಡಲಿ ಏಟು ಬೀಳುವುದು ಸಾಮಾನ್ಯ. ವಿಶ್ವ ಪರಿಸರ ದಿನವೆಂಬ ಸಾಮಾನ್ಯ ಪರಿಜ್ಞಾನ ಇಲ್ಲದೆ ಮರ ಕತ್ತರಿಸಿದ್ದಾರೆ. ಎರಡು ವರ್ಷದ ಹಿಂದೆ ನಾವು ಹೋರಾಟ ಮಾಡಿದ್ದೆವು. ಪರಿಸರದ ಬಗ್ಗೆ ಕಾಳಜಿಯೇ ಇಲ್ಲದವರ ಬಗ್ಗೆ ಮಾತನಾಡಿ ಏನು ಪ್ರಯೋಜನ ಎಂದರು.