ಹುಬ್ಬಳ್ಳಿ: ಹೆಚ್ ವಿಶ್ವನಾಥ್ ಅವರು ಏನು ಮಾತನಾಡಿದ್ದಾರೋ ನನಗೆ ಗೊತ್ತಿಲ್ಲ. ಅವರು ನಮ್ಮ ಗುರುಗಳು. ಅವರ ಮಾತು ನಮಗೆ ಆಶೀರ್ವಾದ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಎಚ್ ವಿಶ್ವನಾಥ್ ಅವರ ಬಗ್ಗೆ ನಮಗೆ ಅಪಾರ ಗೌರವವಿದೆ. ಅವರು ಏನು ಮಾತನಾಡಿದರು ನಮಗೆ ಆಶಿರ್ವಾದವಿದ್ದಂತೆ. ಆದರೆ ಅವರಿಗೆ ಮಂತ್ರಿ ಸ್ಥಾನ ನೀಡುವುದಕ್ಕೆ ಅಡೆತಡೆಗಳಿದ್ದು, ಈ ವಿಚಾರ ಕೋರ್ಟ್ನಲ್ಲಿದೆ ಎಂದು ಹೇಳಿದರು.
ಬಸವನಗೌಡ ಪಾಟೀಲ್ ಯತ್ನಾಳ್ ಅವರ ಬಗ್ಗೆ ಕೂಡ ಅಪಾರ ಗೌರವವಿದೆ. ಹಿರಿಯ ನಾಯಕರು ಅವರಿಗೆ ಸ್ಥಾನಮಾನ ಸಿಗಬೇಕು ಎಂಬ ಆಗ್ರಹವಿದೆ. ಆದರೆ ಸಿಡಿ ಬಗ್ಗೆ ನನಗೆ ಮಾಹಿತಿ ಇಲ್ಲ. ಮಾಧ್ಯಮಗಳ ಮುಂದೆ ಪಕ್ಷದ ಆಂತರಿಕ ವಿಚಾರ ಮಾತನಾಡಬಾರದು ಎಂದು ಅವರು ಮನವಿ ಮಾಡಿದರು.
ಸಿಪಿ ಯೋಗೇಶ್ವರ್ ಅವರ ಮೇಲೆ ಗಂಭೀರ ಆರೋಪಗಳಿದ್ದಲ್ಲಿ ಪಕ್ಷದ ವರಿಷ್ಠರ ಗಮನಕ್ಕೆ ತರಬೇಕು ಆಗ ಅವರು ಕ್ರಮ ತಗೆದುಕೊಳ್ಳುತ್ತಾರೆ. ಅಲ್ಲದೆ ವಿಜಯೇಂದ್ರ ಅವರು ಎಲ್ಲದರಲ್ಲೂ ಹಸ್ತಕ್ಷೇಪ ಮಾಡುತ್ತಾರೆ ಎಂಬುದು ಸುಳ್ಳು. ಸಿಎಂ ಮಗನೆಂದು ಎಲ್ಲರೂ ಆರೋಪ ಮಾಡುತ್ತಾರೆ. ನಮ್ಮ ಇಲಾಖೆ ಅಲ್ಲ. ಬೇರೆ ಇಲಾಖೆಗೂ ಅವರು ಕೈ ಹಾಕಿಲ್ಲ ಎಂದರು.