ಚಾಮರಾಜನಗರ: ಮಾಜಿ ಸಚಿವ ವಿಶ್ವನಾಥ್ ಅಪೇಕ್ಷೆ ಈಡೇರುವಂತೆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ತಿಳಿಸಿದರು.
ವಿಶ್ವನಾಥ್ ಸಾಹಿತ್ಯ ಕ್ಷೇತ್ರದಿಂದ ನಾಮ ನಿರ್ದೇಶನ ಮಾಡುವ ಕುರಿತು ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ವಿಶ್ವನಾಥ್ ಅವರ ಅಪೇಕ್ಷೆ ಈಡೇರುವಂತೆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಸಿದ್ದರಾಮಯ್ಯ ಒಬ್ಬ ಕುತಂತ್ರಿ, ಸ್ವಾರ್ಥಿ, ಜಾತಿ ಬಳಕೆ ಮಾಡುತ್ತಾರೆ. ಇಂತಹ ಕುತಂತ್ರ ರಾಜಕಾರಣದಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರು. ಜಾತಿ ಲಾಭ ಮಾಡಿಕೊಳ್ಳುವುದರಲ್ಲಿ ಅವರು ಎತ್ತಿದ ಕೈ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೆಜೆಪಿ, ಬಿಜೆಪಿ ಇಬ್ಭಾಗ ಕಾರಣ. ಸಿದ್ದರಾಮಯ್ಯನವರಿಗೆ ಶಕ್ತಿಯಿಲ್ಲ ಲಾಟರಿ ಹೊಡೆದಾಗ ಮುಖ್ಯಮಂತ್ರಿಯಾದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹೋಯ್ತು, ಲೋಕಸಭೆ ಚುನಾವಣೆಯಲ್ಲಿ ಎಷ್ಟು ಸ್ಥಾನ ಗೆದ್ದರು, ಜಾತಿ ಆಧಾರದ ಮೇಲೆ ಟಿಕೆಟ್ ಕೊಟ್ಟಿದ್ದೇವೆ ಎನ್ನುತ್ತಾರೆ. ಎಷ್ಟು ಜನರನ್ನು ಇವರು ಗೆಲ್ಲಿಸಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.
ಸಿಎಂಗೆ ಧಮ್ ಇಲ್ಲ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಧಮ್ ಇದ್ದ ವ್ಯಕ್ತಿ ಯಾಕೆ ಸೋತರು, ಸಿಎಂ ಹುದ್ದೆ ಯಾಕೆ ಕಳೆದುಕೊಂಡರು, ಕುರುಬ ಸಮುದಾಯಕ್ಕೆ ಯಾಕೆ ಟಿಕೆಟ್ ಕೊಟ್ಟಿಲ್ಲ, ಧಮ್ ಅನ್ನೋ ಪದದ ಬಗ್ಗೆ ಮಾತನಾಡಲು ಅವರಿಗೆ ಯೋಗ್ಯತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದರು.