ನವದೆಹಲಿ : ರೈತ ಮುಖಂಡರ ಜೊತೆಗೆ ಕೇಂದ್ರ ಸರ್ಕಾರ ನಡೆಸುತ್ತಿರುವ ಸಂಧಾನ ಸಭೆ ನಿರಾಶದಾಯಕವಾಗಿದ್ದು ಪರಿಸ್ಥಿತಿ ವಿಕೋಪಕ್ಕೆ ತೆರಳಿ ರಕ್ತಪಾತಗಳಾದರೆ ಯಾರು ಹೊಣೆ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಪ್ರಶ್ನಿಸಿದೆ.
ವಿವಾದಿತ ಮೂರು ಕೃಷಿ ಕಾನೂನುಗಳ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ. ಎಸ್.ಎ ಬೊಬ್ಡೆ ನೇತೃತ್ವದ ತ್ರಿಸದಸ್ಯ ಪೀಠ ಕೇಂದ್ರ ಸರ್ಕಾರದ ವಿರುದ್ಧ ಇಂದು ಹರಿಹಾಯ್ದಿದೆ.
ಕಳೆದ ಒಂದು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ ಪ್ರತಿಭಟನಾಕಾರರನ್ನು ವಿಶ್ವಾಸಕ್ಕೆ ಪಡೆಯುವ ಕೇಂದ್ರ ಸರ್ಕಾರದ ನಡೆ ಸಮಾಧಾನ ತಂದಿಲ್ಲ. ಇಲ್ಲಿ ಪರಿಸ್ಥಿತಿ ಹದಗೆಟ್ಟಿರುವುದನ್ನು ಕೋರ್ಟ್ ಗಮನಿಸುತ್ತಿದೆ. ಗಣರಾಜ್ಯೋತ್ಸವ ದಿನದಂದು ದೊಡ್ಡ ರ್ಯಾಲಿ ನಡೆಯಲಿದ್ದು ಪರಿಸ್ಥಿತಿ ಕೈ ಮೀರಿ ಹೋದರೆ ಯಾರು ಹೊಣೆ ಎಂದು ಸುಪ್ರೀಂ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ತರಾಟೆ ತೆಗೆದುಕೊಂಡಿದೆ.
ಕೊರೊನಾ ವೈರಸ್ ಭೀತಿ ನಡುವೆ ತೀವ್ರ ಚಳಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಮತ್ತೊಂದು ಕಡೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅವರ ಆಹಾರ ಮತ್ತು ನೀರಿನ ಬಗ್ಗೆ ಯಾರು ಕಾಳಜಿ ವಹಿಸುತ್ತಿದ್ದಾರೆ? ಅಲ್ಲಿ ಸಾಮಾಜಿಕ ಅಂತರ ಕಾಪಾಡಲಾಗುತ್ತದೆಯೇ? ಭವಿಷ್ಯದಲ್ಲಿ ತಪ್ಪುಗಳಾದರೆ ಅದಕ್ಕೆ ಪ್ರತಿಯೊಬ್ಬರು ಜವಾಬ್ದಾರಾಗುತ್ತೇವೆ. ಯಾರೊಬ್ಬರ ರಕ್ತವೂ ನಮ್ಮ ಕೈಯಲ್ಲಿ ಬೇಡ ಎಂದು ನ್ಯಾ.ಎಸ್.ಎ ಬೊಬ್ಡೆ ಅಭಿಪ್ರಾಯಪಟ್ಟರು.
ನಾವು ಮಧ್ಯಸ್ಥಿಕೆವಹಿಸಬೇಕು ಎಂದರೆ ಸದ್ಯ ಮೂರು ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆಹಿಡಿಬೇಕು ಇಲ್ಲದಿದ್ದರೆ ನಾವು ಮಧ್ಯಪ್ರವೇಶ ಮಾಡಲು ಸಾಧ್ಯವಿಲ್ಲ. ನೀವೂ ಕಾನೂನುಗಳನ್ನು ತಡೆ ಹಿಡಿಯದಿದ್ದರೆ ನಾವು ಕಾನೂನುಗಳಿಗೆ ತಡೆ ನೀಡಬೇಕು ಎಂದು ನ್ಯಾ. ಬೊಬ್ಡೆ ಹೇಳಿದರು.
ರೈತರು ಹೋಗಿ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಸಾಧ್ಯವಾದರೆ ಸಮಿತಿ ರಚಿಸುವುದನ್ನು ವಿರೋಧಿಸಲು ಯಾವುದೇ ಕಾರಣಗಳಿಲ್ಲ. ಸಮಸ್ಯೆಯನ್ನು ಸಮಿತಿ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದಿರುವ ನ್ಯಾ. ಬೊಬ್ಡೆ ನಿವೃತ್ತಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸಮಿತಿ ರಚಿಸುವ ಇಂಗಿತವನ್ನು ವ್ಯಕ್ತಪಡಿಸಿದರು.
ನಮ್ಮಿಂದ ನೇಮಕಗೊಳ್ಳುವ ಸಮಿತಿಯ ಮೂಲಕ ಕೃಷಿ ಕಾನೂನು ಸಮಸ್ಯೆಗೆ ಪರಿಹಾರವನ್ನು ನೀಡುವ ಆದೇಶವನ್ನು ರವಾನಿಸಲು ನಾವು ಪ್ರಸ್ತಾಪಿಸುತ್ತಿದ್ದೇವೆ ಮತ್ತು ತಜ್ಞರ ಸಮಿತಿಯ ಮುಖ್ಯಸ್ಥರಾಗಬಲ್ಲ ಮಾಜಿ ಸಿಜೆಐಗಳ ಹೆಸರನ್ನು ಸೂಚಿಸುವಂತೆ ಕೇಂದ್ರ ಮತ್ತು ರೈತ ಸಂಘಗಳಿಗೆ ಸೂಚಿಸಿದೆ. ಸಮತಿ ರಚನೆ ಬಗ್ಗೆ ನಾಳೆ ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಲಿದೆ.