ಬೆಂಗಳೂರು: ಬಜೆಟ್ ವಿರೋಧಿಸಿ ಸಭಾತ್ಯಾಗ ಮಾಡಿರುವ ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಮನವೊಲಿಸಲುವ ಪ್ರಯತ್ನವನ್ನು ಮಾಡಿದ್ದಾರೆ.
ಸಿಎಂ ಯಡಿಯೂರಪ್ಪ ಬಜೆಟ್ ಭಾಷಣಕ್ಕೆ ಕಾಂಗ್ರೆಸ್ ಸದಸ್ಯರು ಅಡ್ಡಿ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದ್ದಾರೆ. ಯಡಿಯೂರಪ್ಪ ಭಾಷಣ ಓದುತ್ತಿದ್ದಂತೆ ಗದ್ದಲ ವ್ಯಕ್ತಪಡಿಸಿದ ಕಾಂಗ್ರೆಸ್ ನಾಯಕರು ಈ ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ ಎಂದು ಹೇಳಿ ಸಭಾತ್ಯಾಗ ಮಾಡಿದ್ದಾರೆ. ಈ ವೇಳೆ ವಿರೋಧ ಪಕ್ಷ ಸದಸ್ಯರನ್ನು ಬೊಮ್ಮಾಯಿ ಮನವೊಲಿಸುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಯಾವುದೇ ಮನವೊಲಿಕೆಗೆ ಸಿದ್ದರಾಮಯ್ಯ ಬಗ್ಗಿಲ್ಲ.
ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು. ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ ಕೊರತೆ ಬಜೆಟ್ ಎಂದು ಕಾಂಗ್ರೆಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ.
‘@BJP4Karnataka ದುರಾಡಳಿತದಿಂದ ತತ್ತರಿಸಿದ ಜನತೆಗೆ ಯಾವುದೇ ಭರವಸೆ ಮೂಡಿಸದ #BogousBudget ಇದು.
ಈ ಬಜೆಟ್ ಬಿಜೆಪಿಯ ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ “ಕೊರತೆ ಬಜೆಟ್”
— Karnataka Congress (@INCKarnataka) March 8, 2021
ಸಿಎಂ ಬಜೆಟ್ ಮಂಡನೆಗೂ ಮುನ್ನ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ರಾಜ್ಯದ ಮುಂಗಡ ಪತ್ರ ಮಂಡಿಸಲು ಅಧಿವೇಶನ ಕರೆದಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಆಯವ್ಯಯ ಮಂಡಿಸಲು ನೈತಿಕತೆ ಇಲ್ಲ. ಯಡಿಯೂರಪ್ಪ ಸಹಿತ ಎಲ್ಲರೂ ರಾಜೀನಾಮೆ ಕೊಡಬೇಕು. ಅನೈತಿಕ ಸರ್ಕಾರ ಬಜೆಟ್ ಮಂಡಿಸುವುದನ್ನ ನಾವು ಕೇಳುತ್ತಾ ಕುಳಿತುಕೊಳ್ಳಬೇಕಾ. ನಾವು ಪ್ರತಿಭಟನೆ ಮಾಡುತ್ತೇವೆ. ಸದನದಲ್ಲಿ ಕಪ್ಪು ಬಟ್ಟೆ ಕಟ್ಟಿಕೊಂಡು ಸರ್ಕಾರವನ್ನು ವಿರೋಧಿಸುತ್ತೇವೆ ಎಂದು ಹೇಳಿದ್ದರು.