ಧಾರವಾಡ: ಮಾಜಿ ಸಚಿವನೋರ್ವನ ಸಹೋದರನ ವಾಹನ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ ಘಟನೆ ಧಾರವಾಡದಲ್ಲಿ ನಡೆದಿದೆ.
ನಗರದ ಕೆವಿಜಿ ಬ್ಯಾಂಕ್ ಎದುರಿಗೆ ಈ ಅಪಘಾತ ಸಂಭವಿಸಿದೆ. ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ ವಿಜಯ್ ಕುಲಕರ್ಣಿ ಅವರ ಕಿಯಾ ಕಾರ್ನಿವಲ್ ಅಪಘಾತಕ್ಕೀಡಾಗಿದೆ. ಪರಿಣಾಮ ಇಬ್ಬರು ಪಾದಚಾರಿಗಳು ಸಾವನ್ನಪ್ಪಿದ್ದಾರೆ.
ಅಪಘಾತ ಸಂಭವಿಸಿದ ಸಮಯದಲ್ಲಿ ವಿಜಯ್ ಕುಲಕರ್ಣಿ ಕೂಡಾ ವಾಹನದಲ್ಲಿದ್ದರು. ಅಪಘಾತದ ನಂತರ ಅವರು ಚಾಲಕನನ್ನ ಸ್ಥಳದಲ್ಲೇ ಬಿಟ್ಟು ಹೊರಟು ಹೋಗಿದ್ದಾರೆ. ಸಾವನ್ನಪ್ಪಿದ ದುರ್ದೈವಿಗಳನ್ನು ಶೇಖರ್ ಹಾಗೂ ಚರಣ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದ ಇಬ್ಬರು ಮಾವ-ಅಳಿಯ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಇನ್ನೋರ್ವ ವ್ಯಕ್ತಿಗೆ ಕೂಡಾ ಗಾಯವಾಗಿದ್ದು, ಆತನನ್ನ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವಿಜಯ್ ಕುಲಕರ್ಣಿ ವಾಹನ ಬೆಳಗಾವಿ ಕಡೆಯಿಂದ ಧಾರವಾಡ ನಗರದ ಕಡೆ ಬರುತಿತ್ತು. ಮೃತರ ಶವಗಳನ್ನ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ವಿಜಯ್ ಕುಲಕರ್ಣಿ ವಾಹನವನ್ನ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.