ಮಂಡ್ಯ: ವಿಧಾನಸೌಧಕ್ಕೆ ಇರುವ ಸೇಫ್ಟಿ ಕೆಆರ್ಎಸ್ ಡ್ಯಾಂಗೆ ಇಲ್ಲ ಎಂದು ಸಂಸದೆ ಸುಮಲತಾ ಅಂಬರೀಶ್ ಆತಂಕ ವ್ಯಕ್ತಪಡಿಸಿದ್ದಾರೆ.
ಇಂದು ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿನ ಗಣಿಗಾರಿಕೆಯ ವಿಚಾರವಾಗಿ ಸಭೆ ನಡೆಸಿದರು. ಈ ವೇಳೆ ಅಧಿಕಾರಿಗಳು ಸರಿಯಾದ ಮಾಹಿತಿ ನೀಡದ ಕಾರಣ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆಯ ವಿಚಾರದಲ್ಲಿ ಅಧಿಕಾರಿಗಳಲ್ಲಿ ಸರಿಯಾದ ಮಾಹಿತಿಯೇ ಇಲ್ಲ. ಗಣಿ ಇಲಾಖೆ, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಅರಣ್ಯ ಇಲಾಖೆಯ ನಡುವೆ ಹೊಂದಾಣಿಕೆ ಕಡಿಮೆ ಇದ್ದಂತೆ ಕಾಣುತ್ತಿದೆ.
ಇನ್ನೂ ಬೇಬಿ ಬೆಟ್ಟದ ವಿಚಾರವಾಗಿ ಕೇಳಿದ್ರು ಸಹ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಅಧಿಕಾರಿಗಳಿಗೆ ಸದ್ಯ ಒಂದು ತಿಂಗಳ ಕಾಲ ಕಾಲಾವಕಾಶ ನೀಡಿದ್ದೇನೆ, ಒಂದು ತಿಂಗಳ ಬಳಿಕವೂ ಹೀಗೆ ಮುಂದುವರಿದರೆ ರಾಜ್ಯ ಸರ್ಕಾರಕ್ಕೆ ಇವರ ಮೇಲೆ ಕ್ರಮ ಕೈಗೊಳ್ಳುವಂತೆ ಪತ್ರ ಬರೆಯುವುದಾಗಿ ಸುಮಲತಾ ಅವರು ತಿಳಿಸಿದರು.
ಇನ್ನೂ ಕೆಆರ್ಎಸ್ ಡ್ಯಾಂಗೆ ವಿಧಾನಸೌಧಕ್ಕೆ ಇರುವ ಸೇಫ್ಟಿಯೂ ಇಲ್ಲ. ಡ್ಯಾಂ ವ್ಯಾಪ್ತಿಯಲ್ಲಿ ಯಾರೋ ಯುವಕರು ಮೋಜು ಮಸ್ತಿ ಮಾಡುತ್ತಾರೆ ಎಂದರೆ ಏನು ಅರ್ಥ. ನಾಳೆಯ ದಿನ ಯಾರೋ ಬಂದು ಡ್ಯಾಂಗೆ ಆತಂಕ ಉಂಟುಮಾಡುವ ಕೆಲಸ ಮಾಡಿದರೆ ಯಾರು ಜವಾಬ್ದಾರಿ. ಪೊಲೀಸ್ ಅವರನ್ನು ಕೇಳಿದ್ರೆ ಐದೇ ನಿಮಿಷದಲ್ಲಿ ಅವರನ್ನು ಹಿಡಿದಿದ್ದೇವೆ ಅಂತಾರೆ. ಐದು ನಿಮಿಷದಲ್ಲಿ ಏನೆಲ್ಲಾ ಆಗಬಹುದು. ಒಂದು ವೇಳೆ ಕೆಆರ್ಎಸ್ ಡ್ಯಾಂಗೆ ಅಪಾಯವಾದರೆ ಬೆಂಗಳೂರಿನ ಜನ ನೀರಿಗಾಗಿ ಪರದಾಡಬೇಕಾಗುತ್ತಾದೆ. ಈ ಭಾಗದ ರೈತರು ಸತ್ತು ಹೋಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.