ಬೆಂಗಳೂರು: ಇಂದಿನಿಂದ ಐದು ದಿನಗಳ ಕಾಲ ವಿಧಾನಸಭೆ ಕಲಾಪ ಇನ್ನಷ್ಟು ಕಾವೇರಲಿದೆ. ಹತ್ತು ಹಲವು ವಿಚಾರಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷ ಕಾಂಗ್ರೆಸ್ ತಂತ್ರ ಹೆಣೆದಿದೆ. ಗೋಹತ್ಯೆ ತಡೆ ಸುಗ್ರೀವಾಜ್ಞೆ, ಬೆಲೆ ಏರಿಕೆ, ರೈತರ ಪ್ರತಿಭಟನೆ, ಸರ್ಕಾರದ ಇತರೆ ಲೋಪಗಳ ವಿಚಾರದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಜಟಾಪಟಿ ನಡೆಯಲಿದೆ.
ಇಂದು ಶಿವಮೊಗ್ಗದ ಹುಣಸೋಡು ಸ್ಫೋಟ ಪ್ರಕರಣದ ಬಗ್ಗೆ ನಿಯಮ 69ರಡಿ ಕಾಂಗ್ರೆಸ್ ನಾಯಕರು ಸದನದಲ್ಲಿ ಚರ್ಚಿಸಲಿದ್ದು, ತೀಕ್ಷ್ಣ ವಾಕ್ಸಮರಕ್ಕೆ ವೇದಿಕೆಯಾಗಲಿದೆ. ಹನ್ನೊಂದು ವಿವಿಧ ಮಸೂದೆಗಳ ಪರ್ಯಾಲೋಚನೆ, ಅಂಗೀಕಾರ ನಡೆಯಲಿದೆ. ಇಂದಿನ ಸದನ ಆರಂಭಕ್ಕೂ ಮುನ್ನ ಕಲಾಪ ಸಲಹಾ ಸಮಿತಿ ಸಭೆ ಕರೆಯಲಾಗಿದೆ. ಹಿಂದಿನ ಸಭೆ ಬಹಿಷ್ಕರಿಸಿದ್ದ ಕಾಂಗ್ರೆಸ್ ನಾಯಕರು ಇಂದಿನ ಸಭೆಗೆ ಬರುವ ನಿರೀಕ್ಷೆ ಇದೆ.
ವಿಧಾನ ಪರಿಷತ್ ಅಧಿವೇಶನದ 3 ನೇ ದಿನವಾದ ಇಂದು ಶಿವಮೊಗ್ಗದ ಅಕ್ರಮ ಗಣಿಗಾರಿಕೆ ಸ್ಫೋಟ ಪ್ರಕರಣ ಸದ್ದು ಮಾಡಲಿದೆ. ಶುಕ್ರವಾರವೇ ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು ಅಂತ ವಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಒತ್ತಾಯ ಮಾಡಿದ್ದರು. ಇಂದು ಸಭಾಪತಿಗಳು ನಿಯಮ 68 ಅಡಿ ಚರ್ಚೆಗೆ ಅವಕಾಶ ಕೊಟ್ಡಿದ್ದಾರೆ. ಇದೇ ವಿಚಾರದಲ್ಲಿ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷ ಕಾಂಗ್ರೆಸ್ ಸಿದ್ಧತೆ ಮಾಡಿಕೊಂಡಿದೆ.
ಶಿವಮೊಗ್ಗ ಪ್ರಕರಣ ಮುಂದಿಟ್ಟುಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ವಿಷಯಗಳ ಬಗ್ಗೆ ಚರ್ಚೆಗೆ ಕಾಂಗ್ರೆಸ್ ನಿರ್ಧಾರ ಮಾಡಿದ್ದು, ಸರ್ಕಾರವನ್ನ ತರಾಟೆಗೆ ತೆಗೆದುಕೊಳ್ಳಲು ನಿರ್ಧಾರ ಮಾಡಿದೆ. ಅಲ್ಲದೆ ಶಿವಮೊಗ್ಗ ಸ್ಫೋಟ ಪ್ರಕರಣವನ್ನ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಒತ್ತಾಯ ಮಾಡುವ ಸಾಧ್ಯತೆ ಇದ್ದು, ಆಡಳಿತ, ವಿಪಕ್ಷಗಳ ನಡುವೆ ಗದ್ದಲ ಗಲಾಟೆ ಆಗೋ ಸಾಧ್ಯತೆ. ಉಳಿದಂತೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ, ನಿಯಮ 330 ಅಡಿ ಚರ್ಚೆ, ಪ್ರಶೋತ್ತರ ಅವಧಿಗಳು ಇಂದಿನ ಕಲಾಪದಲ್ಲಿ ನಡೆಯಲಿವೆ.