ಮಡಿಕೇರಿ: ಟ್ರಾನ್ಸ್ ಫಾರ್ಮರ್ ನಿಂದ ವಿದ್ಯುತ್ ಪ್ರವಹಿಸಿ ಜಾನುವಾರು ಮೃತಪಟ್ಟ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಗಂಧದಕೋಟಿಯಲ್ಲಿ ನಡೆದಿದೆ.
ಗಂಧದಕೋಟಿಯಿಂದ ಗೊಂದಿಬಸವನಹಳ್ಳಿಗೆ ತೆರಳುವ ಮಾರ್ಗದ ಕೆಎಂಟಿ ವಿದ್ಯಾಸಂಸ್ಥೆ ಬಳಿ ಈ ದುರ್ಘಟನೆ ನಡೆದಿದೆ. ಮುಖ್ಯರಸ್ತೆ ಬದಿಯಲ್ಲಿ ಅಳವಡಿಸಿದ್ದ ಟ್ರಾನ್ಸ್ ಫಾರ್ಮರ್ ಬಳಿ ಮೂರು ಜಾನುವಾರುಗಳು ಮೇಯುತ್ತಿದ್ದವು. ಈ ಸಂದರ್ಭ ಏಕಾಏಕಿ ವಿದ್ಯುತ್ ಪ್ರವಹಿಸಿದೆ. ವಿದ್ಯುತ್ ಪ್ರವಹಿಸಿದೊಡನೆ ಎರಡು ಜಾನುವಾರುಗಳು ಪಾರಾಗಿದೆ. ಆದರೆ ಗೊಂದಿಬವನಹಳ್ಳಿಯ ಮಂಜುನಾಥ್ ಎಂಬವರಿಗೆ ಸೇರಿದ 2 ವರ್ಷ ಪ್ರಾಯದ ಸಿಂಧಿ ಹಸು ಸ್ಥಳದಲ್ಲೇ ಮೃತಪಟ್ಟಿದೆ.
ಘಟನೆಯನ್ನು ಕಂಡ ಸ್ಥಳೀಯರು ಸೆಸ್ಕಾಂಗೆ ಕರೆಮಾಡಿ ವಿದ್ಯುತ್ ಕಡಿತಗೊಳಿಸಿದ ಕಾರಣ ಹೆಚ್ಚಿನ ಅನಾಹುತ ತಪ್ಪಿದೆ. ಜನನಿಬಿಡ ಪ್ರದೇಶದಲ್ಲಿ ತೆರೆದ ಸ್ಥಿತಿಯಲ್ಲಿ ಟ್ರಾನ್ಸ್ ಫಾರ್ಮರ್ ಇರುವುದು ಅಪಾಯಕಾರಿ ಬೆಳವಣಿಗೆ. ಕೂಡಲೇ ಟ್ರಾನ್ಸ್ ಫಾರ್ಮರ್ ಸುತ್ತಲು ತಡೆ ನಿರ್ಮಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿ ಪರಿಹಾರ ಕೊಡುವಂತೆ ಸೆಸ್ಕಾಂಗೆ ಮನವಿ ಮಾಡಿದ್ದಾರೆ. 40 ಸಾವಿರ ಮೌಲ್ಯದ ಜಾನುವಾರು ಕಳೆದುಕೊಂಡ ಮಾಲೀಕರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಮಾಜಿ ಗ್ರಾಪಂ ಸದಸ್ಯ ಡಿ.ಎಸ್.ಹರೀಶ್, ಲೋಕೇಶ್, ಪುಟ್ಟಸ್ವಾಮಿ ಮತ್ತಿತರರು ಆಗ್ರಹಿಸಿದ್ದಾರೆ.