ನವದೆಹಲಿ: ವಿದೇಶಿ ಉದ್ಯಮಿಗಳಿಗೆ ಆಗಮನಕ್ಕೆ ಕೇಂದ್ರ ಸರ್ಕಾರ ಷರತ್ತುಬದ್ಧ ಅನುಮತಿ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಕೈಗೊಂಡಿದೆ.
ಹೊಸ ಮಾರ್ಗಸೂಚಿ ಅನ್ವಯ ವಿಶೇಷ ಅನುಮತಿ ಪಡೆದು ಬಿಸಿನೆಸ್ ವೀಸಾ ಮೇಲೆ ಉದ್ದಿಮೆದಾರರು ದೇಶದೊಳಕ್ಕೆ ಬರಲು ಅನುಮತಿ ಇರಲಿದೆ. ಮೊದಲಿಗೆ ವೈದ್ಯಕೀಯ ತಜ್ಞರು, ಸಂಶೋಧಕರು, ಎಂಜಿನಿಯರ್ ಗಳು ದೇಶಕ್ಕೆ ಬರಲು ಹಂತ ಹಂತವಾಗಿ ಅನುಮತಿ ನೀಡಲಾಗುತ್ತದೆ.
ನಾನ್ ಶೆಡ್ಯೂಲ್ ಕಮರ್ಷಿಯಲ್, ಚಾರ್ಟರ್ಡ್ ವಿಮಾನಗಳಲ್ಲಿ ವಿದೇಶಗಳಿಂದ ಬರುವುದಕ್ಕೆ ಕೇಂದ್ರ ಹಸಿರು ನಿಶಾನೆ ತೋರಿದೆ. ಈ ಮೂಲಕ ಶೀಘ್ರವೇ ಅಂತಾರಾಷ್ಟ್ರೀಯ ವಿಮಾನಯಾನವನ್ನು ಪುನಾರಂಭಿಸುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ.
ವಂದೇ ಭಾರತ್ ಮಿಷನ್ ಭಾಗವಾಗಿ ಮತ್ತೆ 75 ವಿಮಾನಗಳ ಮೂಲಕ ಕೆನಡಾ, ಅಮೆರಿಕದಲ್ಲಿ ಇರುವವರನ್ನು ಏರ್ ಲಿಫ್ಟ್ ಮಾಡಲು ಕೇಂದ್ರ ನಿರ್ಧರಿಸಿದೆ. ಈ ಮಧ್ಯೆ, ಜೂನ್ 8ರಿಂದ ಚಾರ್ಧಾಮ್ ಯಾತ್ರೆ ಕೂಡ ಆರಂಭವಾಗಲಿದೆ.
ಐಪಿಎಲ್ ನಡೆಯುತ್ತಾ?
ಕೇಂದ್ರ ಸರ್ಕಾರ ವಿದೇಶಿ ಉದ್ಯಮಿಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಐಪಿಎಲ್ ಆರಂಭವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಐಪಿಎಲ್ ಆಟಗಾರರು ಭಾರತಕ್ಕೆ ಪ್ರವಾಸಿ ವೀಸಾದ ಅಡಿಯಲ್ಲಿ ಬರುವುದಿಲ್ಲ. ಅವರು ಬಿಸಿನೆಸ್ ವೀಸಾದ ಅಡಿ ಬರುತ್ತಾರೆ. ಪ್ರೇಕ್ಷಕರು ಇಲ್ಲದೇ ಇದ್ದರೂ ವಿಶ್ವದ ಹಲವೆಡೆ ಫುಟ್ ಬಾಲ್ ಪಂದ್ಯ ನಡೆಯುತ್ತಿದೆ. ಹೀಗಾಗಿ ಭಾರತದಲ್ಲೂ ಖಾಲಿ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯ ಆಡಿಸಲು ಈಗಾಗಲೇ ಚಿಂತನೆ ನಡೆದಿದೆ. ಈಗ ಸರ್ಕಾರ ಬಿಸಿನೆಸ್ ವೀಸಾಕ್ಕೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಐಪಿಎಲ್ ನಡೆಯುತ್ತಾ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.