ವಿಜಯನಗರ/ಉಡುಪಿ: ರಾಜ್ಯದ ಎಲ್ಲಾ ಎ ದರ್ಜೆ ದೇವಸ್ಥಾನದ ವತಿಯಿಂದ ಬಡವರಿಗೆ ಆಹಾರ ಕಿಟ್ ವಿತರಣೆ ಮಾಡುವ ಯೋಜನೆಯಿದೆ. ಸಿ ದರ್ಜೆಯ ದೇವಸ್ಥಾನದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳಿಗೂ ಆಹಾರ ಕಿಟ್ ಕೊಡುತ್ತೇವೆ ಎಂದು ಧಾರ್ಮಿಕ ದತ್ತಿ ಇಲಾಖೆ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಅಧಿಕಾರಿಗಳ ಜೊತೆ ಸಚಿವ ಕೋಟ ಸಮಾಲೋಚನೆ ಮಾಡಿದರು. ರಾಜ್ಯದಲ್ಲಿ ಸುಮಾರು ಐವತ್ತು ಸಾವಿರ ಸಿ ದರ್ಜೆ ದೇವಸ್ಥಾನಗಳಿಗೆ ಇದರಿಂದ ಅನುಕೂಲ ಆಗುತ್ತದೆ ಎಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿಕೊಟ್ಟ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಕಿಟ್ ಗಳಲ್ಲಿ ಏನೆಲ್ಲಾ ದಿನಸಿ ಆಹಾರ ಸಾಮಾಗ್ರಿ ಇರಬೇಕೆಂದು ಚರ್ಚಿಸಿದರು.
ದೇವಸ್ಥಾನದ ಸಿಬ್ಬಂದಿಗಳಿಗೆ, ಅರ್ಚಕರಿಗೆ ಕಿಟ್ ನೀಡಲಾಗುತ್ತದೆ. ಒಂದು ಕಿಟ್ ಸುಮಾರು ಒಂದುವರೆ ಸಾವಿರ ಮೌಲ್ಯದ್ದಾಗಿದ್ದು, ಮುಜರಾಯಿ ದೇವಸ್ಥಾನದ ಎಲ್ಲಾ ಅರ್ಚಕರಿಗೆ ತಲಾ 3000 ಈಗಾಗಲೇ ಘೋಷಣೆಯಾಗಿದೆ. ಶೀಘ್ರವಾಗಿ ಅದನ್ನು ವಿತರಣೆ ಮಾಡಲಾಗುತ್ತದೆ ಎಂದರು.
ವಿಜಯನಗರ ಜಿಲ್ಲೆಯ ಹಗರಿ ಬೊಮ್ಮನಹಳ್ಳಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ತಾಲೂಕಿನ 133 ದೇವಸ್ಥಾನಗಳ ಆರ್ಚಕರಿಗೆ ಆಹಾರ ಕಿಟ್ಗಳನ್ನು ಶಾಸಕ ಎಸ್.ಭೀಮನಾಯ್ಕ ವಿತರಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕೋವಿಡ್-19ನ ಕೊರೊನಾ ನಿಯಂತ್ರಣಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕಠಿಣ ಲಾಕ್ಡೌನ್ ವಿಧಿಸಿದ್ದರಿಂದ ಎಲ್ಲಾ ದೇವಸ್ಥಾನಗಳು ಮುಚ್ಚಲಾಗಿದೆ. ಆದ್ದರಿಂದ ದೇವಸ್ಥಾನಗಳನ್ನೇ ನಂಬಿ ಜೀವನ ಸಾಗಿಸುತ್ತಿರುವ ಆರ್ಚಕ ಕುಟುಂಬಗಳಿಗೆ ಜೀವನ ಸಾಗಿಸುವುದು ಕಷ್ಟಕರವಾಗಿರುವುದನ್ನು ಮನಗಂಡು ತಾಲೂಕಿನಲ್ಲಿ ಆರ್ಚಕ ಕುಟುಂಬಗಳಿಗೆ ಕಿಟ್ಗಳನ್ನು ವಿತರಿಸಲಾಗುತ್ತಿದೆ ಎಂದರು.