ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಞಾತ ವಾಸದಲ್ಲಿರುವ ಯುವತಿಗೆ ಪೊಲೀಸರು 8ನೇ ಬಾರಿ ನೋಟಿಸ್ ನೀಡಿದ್ದಾರೆ.
ಇಂದು ಸಿಡಿ ಲೇಡಿ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿಟಿ ಸಿವಿಲ್ ಕೋರ್ಟಿಗೆ ಭಾರೀ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಆದರೆ ಸಂಜೆ ಹೊತ್ತಿಗೆ ಇಂದು ಕೋರ್ಟ್ ಮುಂದೆ ಯುವತಿ ಹಾಜರಾಗುವುದಿಲ್ಲ ಎನ್ನುವುದು ಖಚಿತವಾಯ್ತು.
ವಕೀಲ ಜಗದೀಶ್ ನೇತೃತ್ವದ ತಂಡವೊಂದು, ನ್ಯಾಯಾಧೀಶರ ಮುಂದೆ ಸಿಆರ್ಪಿಸಿ ಸೆಕ್ಷನ್ 164ರ ಅಡಿ ಯುವತಿ ಹೇಳಿಕೆ ದಾಖಲಿಸಲು ಅವಕಾಶ ಕೋರಿ ಡೆಪ್ಯೂಟಿ ರಿಜಿಸ್ಟ್ರಾರ್ಗೆ ಅರ್ಜಿ ಸಲ್ಲಿಸಿತು. ವಕೀಲರು ಸಲ್ಲಿಸಿದ ಅರ್ಜಿ ಮತ್ತು ಪ್ರಕರಣದ ಪೂರ್ವಪರದ ಬಗ್ಗೆ ಮಾಹಿತಿ ಪಡೆದುಕೊಂಡರು.
ಸಂಜೆ 4 ಗಂಟೆ ನಂತರ, ಯುವತಿಯನ್ನು ಹಾಜರುಪಡಿಸಲು ಡೆಪ್ಯೂಟಿ ರಿಜಿಸ್ಟ್ರಾರ್ ಅನುಮತಿ ನೀಡಿದ್ರು. ಆದ್ರೆ ಅಷ್ಟೊತ್ತಿಗೆ ಕೋರ್ಟ್ ಕಲಾಪ ಮುಗಿಯುವ ಸಮಯ ಬಂದಿದ್ದ ಕಾರಣ, ನಾಳೆ ಬೆಳಗ್ಗೆ ಯುವತಿಯನ್ನು ಕೋರ್ಟ್ ಮುಂದೆ ಹಾಜರುಪಡಿಸುವ ಚಿಂತನೆ ನಡೆಸಿದ್ದೇವೆ ಎಂದು ವಕೀಲ ಜಗದೀಶ್ ತಿಳಿಸಿದ್ರು.
ಇದಕ್ಕೂ ಮುನ್ನ ಎಸ್ಐಟಿಯ ತನಿಖಾ ವೈಖರಿ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಡಿ ಯುವತಿ, ರಕ್ಷಣೆ ಕೋರಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರ ಬರೆದಿದ್ರು. ನನಗೆ ಸರ್ಕಾರ ಮತ್ತು ಜಾರಕಿಹೊಳಿಯಿಂದ ಜೀವಕ್ಕೆ ಬೆದರಿಕೆ ಇದೆ. ಎಸ್ಐಟಿ ಮೇಲೆ ನಂಬಿಕೆ ಇಲ್ಲ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ನಿಗಾದಲ್ಲಿ ಎಸ್ಐಟಿ ತನಿಖೆ ನಡೆಸಬೇಕು ಎಂದು ಈ ಪತ್ರದ ಮೂಲಕ ಮನವಿ ಮಾಡಿಕೊಂಡರು.