– 21ರ ಪೈಕಿ, 6 ಜನರು ಮಟಾಷ್, ನಾಲ್ವರ ಬಂಧನ
ಲಕ್ನೋ: ಎಂಟು ಮಂದಿ ಅಮಾಯಕ ಪೊಲೀಸರನ್ನು ಬಲಿಪಡೆದ ಮೃತ ಗ್ಯಾಂಗ್ಸ್ಟಾರ್ ವಿಕಾಸ್ ದುಬೆ ಮತ್ತೊಬ್ಬ ಸಹಚರನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ದುಬೆ ಸಹಚರ ಶಶಿಕಾಂತ್ ಎಂದು ಗುರುತಿಸಲಾಗಿದೆ. ಈ ವಿಚಾರದ ಬಗ್ಗೆ ಮಾತನಾಡಿರುವ ಎಡಿಜಿ ಪ್ರಶಾಂತ್ ಕುಮಾರ್, ಜುಲೈ 2ರಂದು ನಮ್ಮ ಎಂಟು ಜನ ಪೊಲೀಸರನ್ನು ಹತ್ಯೆ ಮಾಡಿ, ಅವರ ಬಳಿ ಇದ್ದ ಗನ್ಗಳನ್ನು ಕಿತ್ತುಕೊಂಡು ಹೋಗಿದ್ದರು. ಈ ಎಲ್ಲ ಬಂದೂಕುಗಳನ್ನು ನಾವು ವಶಕ್ಕೆ ಪಡೆದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.
Shashikant, an accused in the case, has also been arrested. He is one of the four accused arrested till now: Prashant Kumar, UP ADG Law & Order. #KanpurEncounterCase pic.twitter.com/psUP9RPlx7
— ANI UP/Uttarakhand (@ANINewsUP) July 14, 2020
ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳಿದ್ದು, ಅವರಲ್ಲಿ 4 ಮಂದಿಯನ್ನು ಬಂಧಿಸಲಾಗಿದೆ. ಜೊತೆಗೆ ವಿವಿಧ ಎನ್ಕೌಂಟರ್ ಗಳಲ್ಲಿ ಮತ್ತು ಪೊಲೀಸ್ ವಿಚಾರಣೆಯ ವೇಳೆ ವಿಕಾಸ್ ದುಬೆ ಸೇರಿದಂತೆ 6 ಆರೋಪಿಗಳನ್ನು ಹತ್ಯೆ ಮಾಡಲಾಗಿದೆ. ಜೊತಗೆ ಈಗ ಅರೆಸ್ಟ್ ಮಾಡಿರುವ ಶಶಿಕಾಂತ್ ಸೇರಿ ನಾಲ್ಕು ಮಂದಿ ನಮ್ಮ ಕಸ್ಟಡಿಯಲ್ಲಿ ಇದ್ದಾರೆ. ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದ 11 ಆರೋಪಿಗಳನ್ನು ನಾವು ಹುಡುಕುತ್ತಿದ್ದೇವೆ ಎಂದು ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಇದರ ಜೊತಗೆ ವಿಕಾಸ್ ದುಬೆ ಮತ್ತು ತಂಡ ನಮ್ಮ ಪೊಲೀಸರನ್ನು ಹತ್ಯೆ ಮಾಡಿ ಅವರ ಬಳಿ ಇದ್ದ, ಶಸ್ತ್ರಾಸ್ತ್ರ ತೆಗೆದುಕೊಂಡು ಹೋಗಿದ್ದರು. ಈ ಶಸ್ತ್ರಾಸ್ತ್ರಗಳನ್ನು ವಿಕಾಸ್ ದುಬೆ ತನ್ನ ಗ್ಯಾಂಗ್ ಸದಸ್ಯರಿಗೆ ಬಿಕ್ರು ಗ್ರಾಮದಲ್ಲಿರುವ ತನ್ನ ನಿವಾಸದಲ್ಲಿ ಮುಚ್ಚಿಡಲು ಹೇಳಿದ್ದ. ಆದರೆ ವಿಕಾಸ್ ದುಬೆಯ ನಿವಾಸದಲ್ಲಿ ಶೋಧ ಕಾರ್ಯ ಮಾಡಿದ ಸಮಯದಲ್ಲಿ ಪೊಲೀಸರಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದೇವೆ ಎಂದು ಪ್ರಶಾತ್ ಕುಮಾರ್ ಹೇಳಿದ್ದಾರೆ.
ದುಬೆ ಎನ್ಕೌಂಟರ್:
ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್ಸ್ಟರ್ ವಿಕಾಸ್ ದುಬೆಯನ್ನು ಕಳೆದ ಶುಕ್ರವಾರ ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.
ಆಗ ಪೊಲೀಸರು ವಿಕಾಸ್ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್ಸ್ಟರ್ ವಿಕಾಸ್ ದುಬೆ ಎನ್ಕೌಂಟರ್ಗೆ ಬಲಿಯಾಗಿದ್ದ.