ಬೆಂಗಳೂರು: ಇಂದು ಸಂಜೆಯಿಂದ ವೀಕೆಂಡ್ ಕರ್ಫ್ಯೂ ಜಾರಿಯಾಗಲಿದೆ. ಆದ್ದರಿಂದ ಬಿಎಂಟಿಸಿ ಬಸ್ಸುಗಳ ಸಂಖ್ಯೆಯನ್ನ ಕಡಿಮೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಬೆ.ಮ.ಸಾ ಸಂಸ್ಥೆಯಿಂದ ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸಮರ್ಪಕ, ಹಾಗೂ ಸುರಕ್ಷಿತ ಸೇವೆಯನ್ನು ಒದಗಿಸುವುದು ಪ್ರಮುಖ ಧ್ಯೇಯವಾಗಿರುತ್ತದೆ. ಕೋವಿಡ್ 19 ನಿರ್ಬಂಧಗಳ ಸಡಿಲಿಕೆಯ ನಂತರ ರಾಜ್ಯ ಸರ್ಕಾರದ ಮಾರ್ಗಸೂಚಿಯಂತೆ ಬೆ.ಮ.ಸಾ.ಸಂಸ್ಥೆಯು ಬಸ್ಸುಗಳ ಕಾರ್ಯಾಚರಣೆಯನ್ನು ಜೂನ್ 21ರಿಂದ ಪ್ರಾರಂಭಿಸಲಾಗಿದೆ.
ರಾಜ್ಯ ಸರ್ಕಾರವು ಜೂನ್ 25 ಶುಕ್ರವಾರ ರಾತ್ರಿ 7 ರಿಂದ 28 ಸೋಮವಾರ ಬೆಳಗ್ಗೆ 05 ರವರೆಗೆ ವಾರಾಂತ್ಯದ ಕರ್ಫ್ಯೂ ಜಾರಿಗೊಳಿಸಿದೆ. ಸದರಿ ಅವಧಿಯಲ್ಲಿ ದೈನಂದಿನ ವಸ್ತುಗಳಾದ ಹಾಲು, ತರಕಾರಿ, ದಿನಸಿ ಮತ್ತು ಔಷಧಾಲಯ ಇತ್ಯಾದಿಗಳನ್ನು ಹೊರತುಪಡಿಸಿ, ಉಳಿದ ವಾಣಿಜ್ಯ ಚಟುವಟಿಕೆಗಳನ್ನು ಹಾಗೂ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿರುತ್ತದೆ. ಆದುದರಿಂದ ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆಯು ಸಹ ಕಡಿಮೆಯಾಗಳಿರುವ ಹಿನ್ನೆಲೆಯಲ್ಲಿ ಸಂಸ್ಥೆಯ ಸಾರಿಗೆ ಸೇವೆಗಳನ್ನು ಕಡಿಮೆಗೊಳಿಸಲಾಗಿದೆ. ಇದನ್ನೂ ಓದಿ: ಬೀದರ್: ಕೊರೊನಾ ಎರಡನೇ ಅಲೆಯಲ್ಲಿ 1,800 ಮಕ್ಕಳಿಗೆ ಸೋಂಕು
ಮೇಲ್ಕಂಡ ಹಿನ್ನೆಲೆಯಲ್ಲಿ ಜೂನ್ 26 ಹಾಗೂ 27 ರಂದು ಸಂಸ್ಥೆಯು ಪ್ರಸ್ತುತ ಕಾರ್ಯಾಚರಣೆಗೊಳಿಸುತ್ತಿರುವ 4000 ಸಾರಿಗೆಗಳಲ್ಲಿ ಶೇ.30 ರಷ್ಟು ಅಂದರೆ 1200 ಸಾರಿಗೆಗಳನ್ನು ಮಾತ್ರ ಕಾರ್ಯಚರಣೆಗೊಳಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.