ಭುವನೇಶ್ವರ: ರಾಜ್ಯದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಪುರಿಯಲ್ಲಿರುವ ಜಗನ್ನಾಥ ದೇವಾಲಯವನ್ನು ವಾರಾಂತ್ಯದಲ್ಲಿ ಮುಚ್ಚಲಾಗುತ್ತದೆ.
ಏಪ್ರಿಲ್ 19ರಿಂದ ಹೊಸ ಮಾರ್ಗಸೂಚಿಗಳು ಜಾರಿಗೆ ಬರಲಿದೆ. ಈ ಬೆನ್ನೆಲ್ಲೇ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು ಹಾಗೂ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸುವ ಸಲುವಾಗಿ ಶನಿವಾರ ಹಾಗೂ ಭಾನುವಾರ ಭಕ್ತರಿಗೆ ದೇವರ ದರ್ಶನವನ್ನು ನಿಷೇಧಿಸಲಾಗುತ್ತಿದೆ ಎಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಶುಕ್ರವಾರ ತಿಳಿಸಿದೆ.
ಒಡಿಶಾದ ಹೊರಗಿನಿಂದ ದೇವಸ್ಥಾನಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು 96 ಗಂಟೆಗಳ ಒಳಗೆ ನಡೆಸಿದ ಕೋವಿಡ್-19 ಪರೀಕ್ಷೆಯ ನೆಗಟಿವ್ ವರದಿಯನ್ನು ತರಬೇಕಾಗುತ್ತದೆ ಅಥವಾ ಎರಡನೇ ಡೋಸ್ ಕೊರೊನಾ ಲಸಿಕೆಯನ್ನು ಹಾಕಿಸಿಕೊಂಡಿರುವ ವರದಿಯನ್ನು ತರಬೇಕೆಂದು ದೇವಾಲಯದ ಸಂಸ್ಥೆ ಆದೇಶ ಹೊರಡಿಸಿದೆ. ಜೊತೆಗೆ ಇತರ ರಾಜ್ಯಗಳಿಂದ ಬರುವ ವ್ಯಕ್ತಿಗಳು ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಪಾಲಿಸುವಂತೆ ಕೂಡ ತಿಳಿಸಲಾಗಿದೆ.