– ಬಿಬಿಎಂಪಿಗೆ ಸವಾಲಾದ ಸಾವಿನ ಪ್ರಕರಣ
ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ವಾಕಿಂಗ್ ಬಂದಿದ್ದ ವ್ಯಕ್ತಿ, ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ.
ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ ಸಂಖ್ಯೆ ನಗರದಲ್ಲಿ ಹೆಚ್ಚಾಗುತ್ತಿರುವುದು ಬಿಬಿಎಂಪಿಗೆ ಬಹುದೊಡ್ಡ ಸವಾಲಾಗಿದೆ. ಇದರ ನಡುವೆ ಏಕಾಏಕಿ ವರದಿಯಾಗುತ್ತಿರುವ ಸಾವಿನ ಪ್ರಕರಣಗಳು ಆರೋಗ್ಯ ಇಲಾಖೆ ಸಿಬ್ಬಂದಿಗೆ ತಲೆನೋವಾಗಿ ಬದಲಾಗುತ್ತಿವೆ.
ಸದ್ಯ ನಗರದ ಆರ್.ಟಿ ನಗರದ ಪಾರ್ಕಿನಲ್ಲಿ ವ್ಯಕ್ತಿ ಸಾವನ್ನಪ್ಪಿದ್ದು, ಮೃತ ವ್ಯಕ್ತಿ ಯಾರು ಎಂಬ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ. ಆದರೆ ಪಾರ್ಕಿನಲ್ಲಿ ವ್ಯಕ್ತಿ ಹೇಗೆ ಮೃತಪಟ್ಟಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಕೊರೊನಾ ಭಯದ ಕಾರಣ ಸಾರ್ವಜನಿಕರು ವ್ಯಕ್ತಿ ಕುಸಿದು ಬಿದ್ದರೂ ಯಾರು ವ್ಯಕ್ತಿಯ ಬಳಿ ತೆರಳಿ ಸಹಾಯ ಮಾಡಲು ಮುಂದಾಗಿಲ್ಲ ಎನ್ನಲಾಗಿದೆ. ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಮೃತದೇಹವನ್ನು ಕೊಂಡೊಯ್ದಿದ್ದಾರೆ. ಸದ್ಯ ಮೃತ ದೇಹದ ಕೊರೊನಾ ಪರೀಕ್ಷೆ ನಡೆದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ನಗರದಲ್ಲಿ ಏಕಾಏಕಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾತ್ತಿದ್ದು, ಹಲವು ಪ್ರಕರಣಗಳಲ್ಲಿ ಮೃತಪಟ್ಟ ಬಳಿಕ ಕೊರೊನಾ ಪಾಸಿಟಿವ್ ಇರುವುದು ದೃಢಪಡುತ್ತಿವೆ. ಅಲ್ಲದೇ ಮೃತರ ಮನೆಯವರಿಗೂ ಪಾಸಿಟಿವ್ ಪತ್ತೆ ಆಗುತ್ತಿದೆ. ಸದ್ಯ ಇಂತಹ ಸಾವಿನ ಪ್ರಕರಣಗಳು ಬಿಬಿಎಂಪಿ ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸುತ್ತಿದೆ.