ನವದೆಹಲಿ: ವಲಸೆ ಕಾರ್ಮಿಕರನ್ನು ಸ್ವಗ್ರಾಮಗಳಿಗೆ ಮರಳಿ ಕಳುಹಿಸಲು ನೂರು ಶ್ರಮಿಕ್ ವಿಶೇಷ ರೈಲುಗಳ ವ್ಯವಸ್ಥೆ ಮಾಡಿಕೊಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ ಎಂದು ದೆಹಲಿ ಸಿಎಂ ಕಚೇರಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವಲಸೆ ಕಾರ್ಮಿಕರ ಸಂರಕ್ಷಣೆ ವಿಚಾರದಲ್ಲಿ ಆಮ್ ಅದ್ಮಿ ಮತ್ತು ಬಿಜೆಪಿ ನಡುವೆ ನಡೆಯುತ್ತಿರುವ ರಾಜಕೀಯ ತಿಕ್ಕಾಟದ ನಡುವೆ ಈ ಮನವಿ ಮಹತ್ವ ಪಡೆದುಕೊಂಡಿದೆ.
ಮುಖ್ಯಮಂತ್ರಿ ಕಚೇರಿ ಸುಮಾರು 4,00,000 ವಲಸೆ ಕಾರ್ಮಿಕರಿಂದ ಆನ್ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಿದೆ. ಅವರಲ್ಲಿ ಹೆಚ್ಚಿನವರು ಬಿಹಾರ ಮತ್ತು ಉತ್ತರ ಪ್ರದೇಶಕ್ಕೆ ಸೇರಿದವರು. ಕಳೆದ ಒಂದು ವಾರದಲ್ಲಿ ಇದುವರೆಗೆ 59 ವಿಶೇಷ ರೈಲುಗಳು ಮತ್ತು 200ಕ್ಕೂ ಹೆಚ್ಚು ಬಸ್ಸುಗಳ ಮೂಲಕ ದೆಹಲಿಯಿಂದ ವಲಸೆ ಕಾರ್ಮಿಕರ ಸಂಚಾರಕ್ಕೆ ಅವಕಾಶ ಮಾಡಿ ಕೊಟ್ಟಿದೆ. ಆದರೆ ಮತ್ತಷ್ಟು ರೈಲುಗಳ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಅಧಿಕೃತವಾಗಿ ಮಾತನಾಡಿರುವ ಡಿಸಿಎಂ ಮನೀಶ್ ಸಿಸೊಡಿಯಾ, ಈವರೆಗೂ ದೆಹಲಿಯಿಂದ 65,000 ಕಾರ್ಮಿಕರ ತಮ್ಮ ಊರುಗಳಿಗೆ ತೆರಳಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಪಂಜಾಬ್ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಿಗೆ ತೆರಳಲು ಬಯಸುತ್ತಿದ್ದಾರೆ. ಅವರನ್ನು ಕಳುಹಿಸಲು ಕೇಂದ್ರ ವಿಶೇಷ ರೈಲುಗಳ ವ್ಯವಸ್ಥೆ ಮಾಡಬೇಕು ಎಂದರು.