-ಸಾರ್ವಜನಿಕರಿಂದ ಚಾಲಕನಿಗೆ ಧರ್ಮದೇಟು
ಕೋಲಾರ: ವಾಹನದ ಸೌಲಭ್ಯವಿಲ್ಲದೇ ನಡೆದುಕೊಂಡು ಬರುತ್ತಿದ್ದ ಮಹಿಳಾ ವಲಸೆ ಕಾರ್ಮಿಕರಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಜಿಲ್ಲೆಯ ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶ ಮೂಲದ ಕಾರ್ಮಿಕ ಕುಟುಂಬ ಬೆಂಗಳೂರಿನಿಂದ ನಡೆದುಕೊಂಡು ತಮ್ಮ ಊರಿಗೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಶ್ರೀನಿವಾಸಪುರ ತಾಲೂಕಿನ ಚಾಲಕ ಗೌಸ್ ಕುಟುಂಬದವರಿಗೆ ಆಂಧ್ರದ ಗಡಿಯವರೆಗೂ ಡ್ರಾಪ್ ಕೊಡೋದಾಗಿ ಹೇಳಿ ಹತ್ತಿಸಿಕೊಂಡಿದ್ದಾನೆ. ತನ್ನ ಟಾಟಾ ಏಸ್ ಗಾಡಿಯಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ತನ್ನ ಪಕ್ಕದಲ್ಲಿಯೇ ಕೂರಿಸಿಕೊಂಡಿದ್ದಾನೆ. ಮಹಿಳೆಯ ಪತಿಯನ್ನು ಪ್ಲಾನ್ ಮಾಡಿ ಹಿಂದೆ ಕೂರಿಸಿದ್ದಾನೆ.
ಪಕ್ಕದಲ್ಲಿ ಕುಳಿತಿದ್ದ ತಾಯಿ-ಮಗಳಿಗೆ ಕಿರುಕುಳ ನೀಡಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ವಾಹನ ನಿಲ್ಲಿಸುವಂತೆ ಹೇಳಿ ಧರ್ಮದೇಟು ನೀಡಿದ್ದಾಳೆ. ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಾರ್ವಜನಿಕರು ಸಹ ವಿಷಯ ತಿಳಿದು ಚಾಲಕನಿಗೆ ಥಳಿಸಿದ್ದಾರೆ.