ಬೆಂಗಳೂರು: ವರ್ಷದ ಮೊದಲ ಹಾಗೂ ದೀರ್ಘ ಸೂರ್ಯಗ್ರಹಣ ಆರಂಭವಾಗಿದ್ದು, ಮುತ್ತಿನ ಹಾರದಂತೆ ಬಾನಿನಲ್ಲಿ ಸೂರ್ಯ ಕಂಗೊಳಿಸುತ್ತಿದ್ದಾನೆ.
ಕಠೋರ ರಾಹುಗ್ರಸ್ತ ಸೂರ್ಯಗ್ರಹಣ ಬೆಳಗ್ಗೆ 10.13ಕ್ಕೆ ಆರಂಭವಾಗಿದ್ದು, ಆಹಾರ ಪದಾರ್ಥಗಳ ಮೇಲೆ ದರ್ಬೆ ಹಾಕಿರಬೇಕು. ಅಲ್ಲದೆ ಗ್ರಹಣ ಕಾಲದಲ್ಲಿ ಬಿಸಿನೀರಿನಲ್ಲಿ ಸ್ನಾನ ಮಾಡಬಾರದು. ನೂರಾರು ವರ್ಷಗಳ ನಂತರ ಈ ಬಾರಿ ಸೂರ್ಯಗ್ರಹಣ ಘಟಿಸುತ್ತಿದೆ. ಅಬುಧಾಬಿ, ಬೆಂಗಳೂರು, ಬಳ್ಳಾರಿ, ಉಡುಪಿ, ಕೊಪ್ಪಳ ಹಾಗೂ ಇತರ ಜಿಲ್ಲೆಗಳಲ್ಲಿಯೂ ಸೂರ್ಯಗ್ರಹಣ ಗೋಚರವಾಗಿದೆ.
ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಧರ್ಮಸ್ಥಳ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರ, ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ಸೇರಿದಂತೆ ಎಲ್ಲಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ.40 ರಷ್ಟು ಸೂರ್ಯ ಗ್ರಹಣ ಗೋಚರವಾಗುತ್ತಿದೆ. ಮಧ್ಯಾಹ್ನ 1.32ಕ್ಕೆ ಗ್ರಹಣ ಮುಕ್ತಾಯವಾಗಲಿದೆ.