ನವದೆಹಲಿ: 2020ರಲ್ಲಿ ಕೊರೊನಾ ವಿಷಯವಾಗಿ ಸುದ್ದಿಯಾಗಿದ್ದ ತಬ್ಲಿಘಿ ಜಮಾತ್ ಮರ್ಕಜ್ ವರ್ಷದ ಬಳಿಕ ಬಾಗಿಲು ತೆರೆದಿದೆ. ದೆಹಲಿ ಹೈಕೋರ್ಟ್ ಆದೇಶದ ಬಳಿಕ ಮರ್ಕಜ್ ತೆರೆಯಲಾಗಿದ್ದು, ಶಬೆ ಬರಾತ್ ಹಿನ್ನೆಲೆ ಭಾನುವಾರ 50 ಜನರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಪ್ರಾರ್ಥನೆ ಸಲ್ಲಿಸುವ 50 ಜನರ ಹೆಸರು ಮತ್ತು ವಿಳಾಸವನ್ನ ಸ್ಥಳೀಯ ಪೊಲೀಸ್ ಠಾಣೆಗೆ ನೀಡಲಾಗಿತ್ತು. ಪ್ರಾರ್ಥನೆ ವೇಳೆ ಮರ್ಕಜ್ ಹೊರ ಭಾಗದಲ್ಲಿ ಪೊಲೀಸರನ್ನ ನಿಯೋಜನೆ ಮಾಡಲಾಗಿತ್ತು. ಹೈಕೋರ್ಟ್ ಆದೇಶದ ಪ್ರಕಾರ ಸ್ಥಳೀಯ ಪೊಲೀಸರ ಅನುಮತಿ ಪಡೆದುಕೊಳ್ಳಲಾಗಿತ್ತು. ಪ್ರಾರ್ಥನೆ ವೇಳೆ ಕೊರೊನಾ ನಿಯಮಗಳನ್ನ ಪಾಲಿಸುವಂತೆ ಜಮಾತ್ ಗೆ ಸೂಚಿಸಲಾಗಿತ್ತು.
ಶಬೆ ಬರಾತ್ ಮತ್ತು ರಂಜಾನ್ ಹಿನ್ನೆಲೆ ಮರ್ಕಜ್ ತೆರೆಯಲು ಅನುಮತಿ ನೀಡಬೇಕೆಂದು ದೆಹಲಿಯ ವಕ್ಫ್ ಬೋರ್ಡ್ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ಶಬೆ ಬಾರತ್ ದಿನದಂದು ವಿಶೇಷ ಪ್ರಾರ್ಥನೆ ಮತ್ತು ನಮಾಜ್ ಮಾಡಲಾಗುತ್ತದೆ. ಆದ್ದರಿಂದ ಪವಿತ್ರ ರಂಜಾನ್ ಆಚರಣೆಗೆ ಅವಕಾಶ ನೀಡಬೇಕೆಂದು ವಕ್ಫ್ ಬೋರ್ಡ್ ಮನವಿ ಮಾಡಿಕೊಂಡಿತ್ತು.
ವಕ್ಫ್ ಬೋರ್ಡ್ ಮನವಿಗೆ ಸ್ಪಂದಿಸಿದ ನ್ಯಾಯಾಲಯ ಮರ್ಕಕ್ ತೆರೆಯಲು ಷರತ್ತು ಬದ್ಧ ಅನುಮತಿ ನೀಡಿತ್ತು. ಮರ್ಕಜ್ ತೆರೆಯೋದನ್ನ ಸ್ಥಳೀಯ ಪೊಲೀಸರ ಗಮನಕ್ಕೆ ತರಬೇಕು. ಮರ್ಕಜ್ ನಲ್ಲಿ ಸದ್ಯ ಕೇವಲ 50 ಜನರು ಮಾತ್ರ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಏಪ್ರಿಲ್ 12ಕ್ಕೆ ನಡೆಯಲಿದೆ.