– ಎಲ್ಲರಿಗೂ ದರ್ಶನಕ್ಕೆ ಅವಕಾಶ ನೀಡಿ, ಇಲ್ಲವೇ ಯಾರಿಗೂ ನೀಡಬೇಡಿ
– ಕೇವಲ ವಿಐಪಿಗಳಿಗೇಕೆ ಅವಕಾಶ ಎಂದು ಪ್ರಶ್ನೆ
ಹಾಸನ: ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಹಾಸನಾಂಬೆ ದೇವಾಲಯದ ಬಾಗಿಲನ್ನು ನವಂಬರ್ 5ರಿಂದ ತೆರೆಯಲಾಗಿದ್ದು, ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ಮಾತ್ರ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಟ್ಟು ಸಾಮಾನ್ಯ ಭಕ್ತರ ಪ್ರವೇಶ ನಿಷೇಧಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ವರ್ಷ ಕೊರೊನಾ ಕಾರಣ ನೀಡಿ ಆಹ್ವಾನಿತ ಜನಪ್ರತಿನಿಧಿಗಳು, ವಿಐಪಿಗಳಿಗೆ ನವೆಂಬರ್ 16 ರವರೆಗೆ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ಜನಸಾಮಾನ್ಯರ ದರ್ಶನ ನಿಷೇಧಿಸಲಾಗಿದೆ. ಜನಸಾಮಾನ್ಯರಿಗೆ ಒಂದು ಕಾನೂನು, ರಾಜಕಾರಣಿಗಳಿಗೆ ಮತ್ತೊಂದು ಕಾನೂನು. ಇದು ಎಷ್ಟರಮಟ್ಟಿಗೆ ಸರಿ, ದರ್ಶನದ ವ್ಯವಸ್ಥೆ ಇಲ್ಲ ಎಂದರೆ ಯಾರಿಗೂ ಅವಕಾಶ ನೀಡಬೇಡಿ ಎಂದು ಹಾಸನಾಂಬೆ ಭಕ್ತರು ಕಿಡಿಕಾರಿದ್ದಾರೆ.
ಹಾಸನಾಂಬೆ ದೇವಿ ಹಲವು ಪವಾಡಗಳಿಗೆ, ನಂಬಿಕೆಗಳಿಗೆ ಹೆಸರಾಗಿದ್ದು, ಪೂಜೆ ಸಲ್ಲಿಸಿ ಬಾಗಿಲು ಹಾಕಿದ ನಂತರ ಹಚ್ಚಿಟ್ಟ ದೀಪ ಮುಂದಿನ ವರ್ಷ ಬಾಗಿಲು ತೆರೆಯುವವರೆಗೂ ಬೆಳಗುತ್ತಿರುತ್ತದೆ. ದೇವರಿಗೆ ಮುಡಿಸಿದ ಹೂ ವರ್ಷವಾದರೂ ಬಾಡಿರುವುದಿಲ್ಲ. ದೇವರ ಮುಂದಿಟ್ಟ ನೈವೇದ್ಯ ಹಳಸಿರುವುದಿಲ್ಲ ಎಂಬ ನಂಬಿಕೆಯಿದೆ. ಅಷ್ಟೆ ಅಲ್ಲದೆ ವರ್ಷಕ್ಕೊಮ್ಮೆ ಹಾಸನಾಂಬೆ ದರ್ಶನ ಪಡೆದು ಪೂಜೆ ಸಲ್ಲಿಸಿದರೆ ನಮ್ಮ ಬೇಡಿಕೆ ಈಡೇರಲಿದೆ ಎಂಬ ನಂಬಿಕೆಯಿದೆ. ಹೀಗಾಗಿ ವರ್ಷಕ್ಕೊಮ್ಮೆ ಹಾಸನಾಂಬೆ ದೇವಾಲಯದ ಬಾಗಿಲು ತೆರೆದಾಗ ಲಕ್ಷಾಂತರ ಭಕ್ತರು ದೇವರ ದರ್ಶನ ಪಡೆದು ಪುನೀತರಾಗುತ್ತಾರೆ.