ಮಡಿಕೇರಿ: ಕೇರಳದ ವಯನಾಡಿನ ಗಿರಿಜನ ಹಾಡಿಯಲ್ಲಿ ಮಾವೋವಾದಿ ನಕ್ಸಲರು ಪ್ರತ್ಯಕ್ಷರಾಗಿ ನಕ್ಸಲ್ ಪರ ಘೋಷಣೆ ಮತ್ತು ಕೇರಳ ಸರ್ಕಾರಕ್ಕೆ ಕರ ಪತ್ರದ ಮೂಲಕ ಕಠಿಣ ಸಂದೇಶ ರವಾನಿಸಿ, ಕಾಡಿನಲ್ಲಿ ಮರೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಮಳೆಯ ನಡುವೆಯೇ ನಕ್ಸಲ್ ನಿಗ್ರಹ ದಳ ಗಡಿ ಭಾಗಗಳಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ. ಕುಟ್ಟ ಮತ್ತು ವಿರಾಜಪೇಟೆ ಆರ್ಜಿಯಲ್ಲಿರುವ ಎಎನ್ಎಫ್ ಕ್ಯಾಂಪ್ಗಳ ಕಮಾಂಡೋಗಳು ಕುಟ್ಟ, ತೋಲ್ಪಟ್ಟಿ ಮತ್ತು ಕೇರಳದೊಂದಿಗೆ ಅರಣ್ಯ ಗಡಿ ಹಂಚಿಕೊಂಡಿರುವ ಪ್ರದೇಶಗಳಲ್ಲಿ ನಿರಂತರ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಮಾವೋವಾದಿ ನಕ್ಸಲರು, ಅರಣ್ಯದ ಮೂಲಕ ಕೊಡಗು ಜಿಲ್ಲೆಗೆ ಕಾಲಿಡದಂತೆ ಎಎನ್ಎಫ್ ಯೋಧರು ಹದ್ದಿನ ಕಣ್ಣಿಟ್ಟಿದ್ದಾರೆ. ಈ ಹಿಂದೆ ಕಾಲೂರು, ಸಂಪಾಜೆ, ಕರಿಕೆ, ಕಕ್ಕಬ್ಬೆ ಗ್ರಾಮಗಳಲ್ಲೂ ಶಂಕಿತ ನಕ್ಸಲರ ಹೆಜ್ಜೆ ಗುರುತುಗಳು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ನಕ್ಸಲ್ ನಿಗ್ರಹ ದಳದ ತಂಡಗಳನ್ನು ಶಾಶ್ವತವಾಗಿ ನಿಯೋಜನೆ ಮಾಡಲಾಗಿದೆ.