ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಕೃಷ್ಣಾ ನದಿಯ ನಡುಗಡ್ಡೆಗಳಾದ ಮ್ಯಾದರಗಡ್ಡಿ, ಕರಕಲಗಡ್ಡಿ, ಓಂಕಾರಗಡ್ಡಿಯಲ್ಲಿನ ಜನರ ರಕ್ಷಣೆಗೆ ಜಿಲ್ಲಾಡಳಿತ ಮುಂದಾಗಿದೆ.
ಇಂದು ಮ್ಯಾದರಗಡ್ಡಿ ಜನರ ಸ್ಥಳಾಂತರಕ್ಕೆ ಮುಂದಾಗಿರುವ ಅಧಿಕಾರಿಗಳು ಇದುವರೆಗೆ ನಡುಗಡ್ಡೆಯ ಯಲ್ಲಮ್ಮ, ದೇವಮ್ಮ, ನಾದಮ್ಮ, ಮಲ್ಲಪ್ಪ ನಾಲ್ಕು ಜನರನ್ನ ಸುರಕ್ಷಿತವಾಗಿ ಅಗ್ನಿಶಾಮಕ ದಳ ಕರೆತಂದಿದೆ. ಇನ್ನೂ 10 ಜನ ನಡುಗಡ್ಡೆಯಲ್ಲೆ ಉಳಿದ್ದಾರೆ. 100 ಕುರಿ, 10 ಆಕಳು ಹಾಗೂ ಮೇಕೆಗಳು ಇರುವುದರಿಂದ ಹೊರ ಬರಲು ಒಪ್ಪದ ಜನ ನಡುಗಡ್ಡೆಯಲ್ಲೇ ಇದ್ದಾರೆ. ಶಾಶ್ವತ ಪರಿಹಾರವಾಗಿ ಮನೆ, ಜಮೀನು ನೀಡದರೆ ನಡುಗಡ್ಡೆ ಬಿಡುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ.
ಓಂಕಾರಗಡ್ಡಿ, ಹಾಲಗಡ್ಡಿ, ಕರಕಲಗಡ್ಡಿಗಳಲ್ಲಿ ಒಟ್ಟು 14 ಕುಟುಂಬಗಳಿದ್ದು 104 ಜನ ವಾಸವಾಗಿದ್ದಾರೆ. ಮ್ಯಾದರಗಡ್ಡಿಯಲ್ಲಿ ಒಂದೇ ಕುಟುಂಬದ 14 ಜನ ವಾಸವಾಗಿದ್ದಾರೆ. ಉಳಿದೆರಡು ನಡುಗಡ್ಡೆ ಜನರಿಗೆ ಪರಿಹಾರವಾಗಿ ಜಮೀನು, ಮನೆ ನೀಡಲಾಗಿದೆ. ಆದರೆ ಸರ್ಕಾರ ನಮಗೆ ಯಾವುದೇ ಪರಿಹಾರ ನೀಡಿಲ್ಲ ಅಂತ ಆರೋಪಿಸಿದ್ದಾರೆ. ಕಳೆದ ವರ್ಷ ಆಣೆ ಪ್ರಮಾಣ ಮಾಡಿ ಮನವೊಲಿಸಿ ಕರೆದುಕೊಂಡು ಬಂದು ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಅನಾರೋಗ್ಯದಿಂದ ಬಳಲಿದರೂ ಚಿಕಿತ್ಸೆ ಸಿಕ್ಕಿರಲಿಲ್ಲ. ಊಟ ಸಹ ಸರಿಯಾಗಿ ಕೊಟ್ಟಿರಲಿಲ್ಲ ಅಂತ ನಡುಗಡ್ಡೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನದಿಯಲ್ಲಿ ಪ್ರವಾಹ ಹೆಚ್ಚಾಗುವ ಸಾಧ್ಯತೆಗಳು ಇರುವುದರಿಂದ ಲಿಂಗಸುಗೂರಿನ ಸಹಾಯಕ ಆಯುಕ್ತ ರಾಜಶೇಖರ ಡಂಬಳ್ ಮತ್ತು ಡಿವೈಎಸ್ಪಿ ಹುಲ್ಲೂರ ನೇತೃತ್ವದಲ್ಲಿ ಅಗ್ನಿಶಾಮಕ ದಳ ಕಾರ್ಯಚರಣೆ ಮುಂದುವರಿಸಿದೆ. ಅಧಿಕಾರಿಗಳು ಎಲ್ಲರ ಮನವೊಲಿಸಿ ಹೊರ ತರುವ ಪ್ರಯತ್ನ ಮುಂದುವರಿಸಿದ್ದಾರೆ. ಈ ಬಾರಿ ರಕ್ಷಣೆ ಮಾಡಿ ಕರೆತರುವ ನಡುಗಡ್ಡೆ ಜನರನ್ನ ಪಕ್ಕದ ಗ್ರಾಮ ಯರಗೋಡಿ ಶಾಲೆಯಲ್ಲಿ ಇರಿಸದೇ ವಸತಿ ನಿಲಯದಲ್ಲಿ ವ್ಯವಸ್ಥೆ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಆದರೆ ರಕ್ಷಣಾ ಕಾರ್ಯಾಚರಣೆ ಮಾಡಿ ಜನರನ್ನ ಹೊರಗೆ ಕರೆದುಕೊಂಡು ಬಂದರೂ ಈಜುವುದರಲ್ಲಿ ಪರಿಣಿತರಾಗಿರುವ ನಡುಗಡ್ಡೆ ಜನ ತೆಪ್ಪ ಇಲ್ಲವೇ ಈಜಿಕೊಂಡು ಮರಳಿ ನಡುಗಡ್ಡೆ ತೆರಳುವ ಭಯ ಅಧಿಕಾರಿಗಳನ್ನ ಕಾಡುತ್ತಿದೆ.