ಹಾಸನ: ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಲಾರಿಯಡಿ ಸಿಲುಕಿ ನರಳಾಡಿ ಪ್ರಾಣ ಬಿಟ್ಟ ಘಟನೆ ಹಾಸನ ಜಿಲ್ಲೆಯ, ಸಕಲೇಶಪುರದಲ್ಲಿ ನಡೆದಿದೆ.
ಸಕಲೇಶಪುರದ ಬಿಎಂ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಲಾರಿ ಡಿಕ್ಕಿ ಹೊಡೆದಿದೆ. 23 ವರ್ಷದ ಪ್ರವೀಣ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ. ನಂತರ ಅಂಬುಲೆನ್ಸ್ ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯಲ್ಲಿ ಪ್ರವೀಣ್ ಕೊನೆಯುಸಿರೆಳೆದಿದ್ದಾನೆ.
ಅಪಘಾತ ನಡೆದು 15 ನಿಮಿಷಗಳ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬಾರದಿದ್ದರಿಂದ ಲಾರಿಯ ಚಕ್ರದಡಿಗೆ ಸಿಲುಕಿದ ಯುವಕ ಒದ್ದಾಡುತ್ತಿದ್ದ ದೃಶ್ಯ ಸ್ಥಳದಲ್ಲಿ ನೆರೆದಿದ್ದವರ ಮನಕಲಕುವಂತಿತ್ತು. ಅಪಘಾತದ ಹಿನ್ನೆಲೆಯಲ್ಲಿ ಬಿ.ಎಂ ರಸ್ತೆಯಲ್ಲಿ ಅರ್ಧ ಕಿಲೋಮೀಟರಿಗೂ ಹೆಚ್ಚಿನ ದೂರ ವಾಹನಗಳು ಸಾಲುಗಟ್ಟಿ ನಿಂತು ಸಂಚಾರದಲ್ಲಿ ವ್ಯವಸ್ಥೆಯಲ್ಲಿ ಅಸ್ತವ್ಯಸ್ತವಾಗಿತ್ತು.
ತೇಜಸ್ವಿ ಚಿತ್ರಮಂದಿರದ ಬಳಿ ಇರುವ ವೃತ್ತ ತೀರಾ ಕಿರಿದಾಗಿದ್ದು ಬೆಂಗಳೂರು, ಮಂಗಳೂರು ಹಾಗೂ ಚಿಕ್ಕಮಂಗಳೂರು ಜಿಲ್ಲೆಗಳಿಗೆ ಸಂಪರ್ಕಿಸುವ ವೃತ್ತವಾಗಿರುವುದರಿಂದ ದಿನನಿತ್ಯ ಸಾವಿರಾರು ವಾಹನಗಳು ತಿರುಗಾಡುತ್ತಿರುತ್ತವೆ. ಜನಸಂದಣಿಯ ಹೆಚ್ಚಾಗಿರುವುದರಿಂದ ಪದೇ ಪದೇ ಈ ಸ್ಥಳದಲ್ಲಿ ಅಪಘಾತವಾಗುತ್ತದೆ. ಆದ್ದರಿಂದ ಈ ವೃತ್ತವನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.