– ಮನೆಯವರನ್ನ ಒಪ್ಪಿಸಲು ಆಗಿಲ್ಲವೆಂದು ಸೂಸೈಡ್
– ಎರಡು ವರ್ಷದ ಪ್ರೀತಿ ಸಾವಿನಲ್ಲಿ ಅಂತ್ಯ
ಹೈದರಾಬಾದ್: ಲಾಡ್ಜ್ನಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಯುವತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಇದೀಗ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯುವಕ ಕೂಡ ಮೃತಪಟ್ಟಿರುವ ಘಟನೆ ತೆಲಂಗಾಣದ ಮೆಡ್ಚಲ್-ಮಲ್ಕಾಜ್ಗಿರಿ ಜಿಲ್ಲೆಯಲ್ಲಿ ನಡೆದಿದೆ.
ಶ್ರಾವಣಿ ಮತ್ತು ಅಜಯ್ ಮೃತ ಪ್ರೇಮಿಗಳು. ಮಂಗಳವಾರ ಜಿಲ್ಲೆಯ ಮೆಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಲಾಡ್ಜ್ನಲ್ಲಿ ಕೀಟನಾಶಕವನ್ನು ಕುಡಿದು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ ಘಟನೆಯಲ್ಲಿ ಯುವತಿ ಶ್ರಾವಣಿ ಸ್ಥಳದಲ್ಲೇ ಮೃತಪಟ್ಟಿದ್ದಳು. ಗೆಳೆಯ ಅಜಯ್ ಸಾವು-ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದನು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅಜಯ್ ಮೃತಪಟ್ಟಿದ್ದಾನೆ.
ಏನಿದು ಪ್ರಕರಣ?
ಮೃತ ಶ್ರಾವಣಿ ಮತ್ತು ಅಜಯ್ ಇಬ್ಬರು ಎರಡು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಅವರ ಪ್ರೀತಿಯ ವಿಚಾರ ಮನೆಯರಿಗೆ ಗೊತ್ತಾಗಿದೆ. ಆಗ ಶ್ರಾವಣಿ ಕುಟುಂಬದವರು ಈ ಮದುವೆ ಒಪ್ಪಿಗೆ ಸೂಚಿಸಿದ್ದರು. ಆದರೆ ಅಜಯ್ ಕುಟುಂಬದವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಪ್ರೇಮಿಗಳಿಬ್ಬರು ಅವರನ್ನು ಒಪ್ಪಿಸಲು ತುಂಬಾ ಪ್ರಯತ್ನ ಮಾಡಿದ್ದಾರೆ. ಆದರೆ ಕೊನೆಗೂ ಅಜಯ್ ಪೋಷಕರು ಮದುವೆಗೆ ಒಪ್ಪಲಿಲ್ಲ. ಇದರಿಂದ ನೋಂದ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಅದರಂತೆಯೇ ಜುಲೈ 14 ಮಂಗಳವಾರ ಇಬ್ಬರು ಮಡಿಪಲ್ಲಿಯಲ್ಲಿರುವ ಲಾಡ್ಜ್ಗೆ ಬಂದು ರೂಮ್ ಬುಕ್ ಮಾಡಿದ್ದರು. ಆದರೆ ಮಂಗಳವಾರ ರಾತ್ರಿ ರೂಮಿಗೆ ಹೋಗಿ ಲಾಕ್ ಮಾಡಿಕೊಂಡವರು ಬುಧವಾರ ಬೆಳಗ್ಗೆ ತುಂಬಾ ಸಮಯವಾದರೂ ರೂಮಿನಿಂದ ಹೊರಗೆ ಬರಲಿಲ್ಲ. ಇದರಿಂದ ಲಾಡ್ಜ್ ಸಿಬ್ಬಂದಿ ಅನುಮಾನಗೊಂಡು ರೂಮಿನ ಬಾಗಿಲು ತೆಗೆದು ನೋಡಿದ್ದಾರೆ. ಆಗ ಪ್ರೇಮಿಗಳಿಬ್ಬರು ಕೀಟನಾಶಕವನ್ನು ಕುಡಿದು ಹಾಸಿಗೆಯ ಮೇಲೆ ಪ್ರಜ್ಞಾಹೀನರಾಗಿ ಬಿದ್ದಿದ್ದರು.
ತಕ್ಷಣ ಲಾಡ್ಜ್ ಸಿಬ್ಬಂದಿ ಮಡಿಪಲ್ಲಿ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು. ಮಾಹಿತಿ ತಿಳಿದು ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದರು. ಆಗ ಶ್ರಾವಣಿ ಮೃತಪಟ್ಟಿದ್ದಳು. ಆದರೆ ಅಜಯ್ ಇನ್ನೂ ಉಸಿರಾಡುತ್ತಿದ್ದನು. ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಈಗ ಅಜಯ್ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.