– ಅಲ್ಲಿತ್ತು ಒಂದೇ ಮಂಚ, ಹಾಸಿಗೆ
ಚೆನ್ನೈ: ಪೊಲೀಸ್ ಅಧಿಕಾರಿಗಳು ಲಾಡ್ಜ್ವೊಂದರಲ್ಲಿ ದಾಳಿ ನಡೆಸಿದ್ದು, ಬೆಂಗಳೂರಿನ 22 ವರ್ಷದ ಯುವತಿಯನ್ನು ರಕ್ಷಣೆ ಮಾಡಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳು ಲಾಡ್ಜಿನ ರೂಮಿನಲ್ಲಿ ಕನ್ನಡಿಯ ಹಿಂದೆ ರಹಸ್ಯ ರೂಮ್ ನೋಡಿ ಅಚ್ಚರಿಗೊಂಡಿದ್ದಾರೆ. ಅದರಲ್ಲಿ ಯುವತಿಯೊಬ್ಬಳನ್ನು ಕೂಡಿ ಹಾಕಲಾಗಿತ್ತು. ರಹಸ್ಯ ರೂಮಿನಲ್ಲಿದ್ದ ಬೆಂಗಳೂರಿನ 22 ವರ್ಷದ ಯುವತಿಯನ್ನು ರಕ್ಷಣೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಖಚಿತ ಮಾಹಿತಿಯ ಆಧಾರದ ಮೇರೆಗೆ ಕೊಯಮತ್ತೂರು ಪೊಲೀಸರು ಮೆಟ್ಟುಪಾಳಯಂ ಉಪವಿಭಾಗದ ಊಟಿ ರಸ್ತೆಯಲ್ಲಿರುವ ಶರಣ್ಯ ಲಾಡ್ಜ್ನಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ಸಮಯದಲ್ಲಿ ಪೊಲೀಸರು ಲಾಡ್ಜ್ನಲ್ಲಿ ರಹಸ್ಯ ರೂಮನ್ನು ಪತ್ತೆ ಮಾಡಿದ್ದಾರೆ. ಅದರಲ್ಲಿ ಡ್ರೆಸ್ಸಿಂಗ್ ಕನ್ನಡಿ ಇತ್ತು. ಆ ಕನ್ನಡಿ ಹಿಂದೆ ಒಂದು ಸೀಕ್ರೆಟ್ ರೂಮ್ ಪತ್ತೆಯಾಗಿದೆ.
ಅಲ್ಲಿಗೆ ಹೋಗಲು ಕಿಟಕಿ ಗಾತ್ರದ ಪ್ರವೇಶವಿತ್ತು. ಆ ರೂಮಿನಲ್ಲಿ ಒಂದೇ ಮಂಚ ಮತ್ತು ಹಾಸಿಗೆ ಇತ್ತು. ಅದರಲ್ಲಿ ಯುವತಿಯನ್ನು ಆರೋಪಿಗಳಾದ ಮಹೇಂದ್ರನ್ (46) ಮತ್ತು ಗಣೇಶನ್ (36) ಇಬ್ಬರು ಕೂಡಿ ಹಾಕಿದ್ದರು.
ಮಹೇಂದ್ರನ್ ಕಳೆದ ಮೂರು ವರ್ಷಗಳಿಂದ ಲಾಡ್ಜ್ ನಡೆಸುತ್ತಿದ್ದಾನೆ. ಗಣೇಶನ್ ಲಾಡ್ಜ್ನಲ್ಲಿ ರೂಮ್ ಬಾಯ್ ಆಗಿ ಕೆಲಸ ಮಾಡುತ್ತಿದ್ದಾನೆ. ಇಬ್ಬರೂ ವೆಲ್ಲೂರು ಜಿಲ್ಲೆಯವರು ಎಂದು ವರದಿಯಾಗಿದೆ. ಪೊಲೀಸರು ತಕ್ಷಣ ಮಹಿಳೆಯನ್ನು ರಕ್ಷಿಸಿ ಮಹಿಳೆಯರ ಮನೆಗೆ ಕಳುಹಿಸಿ ಇಬ್ಬರನ್ನು ಬಂಧಿಸಿದರು. ದಾಳಿಯ ನಂತರ ಲಾಡ್ಜನ್ನು ಸೀಲ್ ಮಾಡಲಾಗಿದೆ.
ಕೆಲವು ವರ್ಷದಿಂದ ಇಲ್ಲಿ ಲಾಡ್ಜ್ ನಡೆಸಲಾಗುತ್ತಿದೆ. ಕೋವಿಡ್ಗಿಂತ ಮೊದಲು ಪ್ರವಾಸಿಗರು ಬರುತ್ತಿದ್ದರು. ಯುವತಿ ಕೇವಲ 2-3 ದಿನಗಳ ಹಿಂದೆ ಬೆಂಗಳೂರಿನಿಂದ ಕೊಯಮತ್ತೂರಿಗೆ ಬಂದಿದ್ದರು. ಅಂದಿನಿಂದ ಇಂದಿನವರೆಗೂ ಇಬ್ಬರು ಆರೋಪಿಗಳು ಯುವತಿಯನ್ನು ಲಾಡ್ಜ್ನಲ್ಲಿ ಕೂಡಿ ಹಾಕಿದ್ದಾರೆ. ಕೋವಿಡ್ ಕಾರಣದಿಂದ ಲಾಡ್ಜ್ ಕ್ಲೋಸ್ ಮಾಡಲಾಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಂದು ಹೇಳಿದರು.
ಸದ್ಯಕ್ಕೆ ಪೊಲೀಸರು ಈ ಕುರಿತು ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದು, ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಲ್ಲದೇ ಲಾಡ್ಜ್ ಅನ್ನು ಸೀಲ್ ಮಾಡಿದ್ದಾರೆ.