ಯಾದಗಿರಿ: ರಾಜಕಾರಣಿಗಳ ಅಭಿಮಾನಿಗಳು ಅಂದರೆ ಅವರ ಪ್ರಭಾವ ಬಳಸಿಕೊಂಡು ವಿವಿಧ ಕೆಲಸಗಳನ್ನು ಮಾಡಿಸಿಕೊಳ್ಳುವವರೇ ಹೆಚ್ಚು. ಆದರೆ ಜಿಲ್ಲೆಯ ಕೇಂಭಾವಿ ಪಟ್ಟಣದ ಯುವಕರ ತಂಡವೊಂದು ಲಾಕ್ಡೌನ್ನಿಂದ ಪರದಾಡುತ್ತಿರುವ ಜನರಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಎರಡು ಹೊತ್ತು ಊಟ ನೀಡುತ್ತಿದೆ.
ಶಾಸಕ ರಾಜೂಗೌಡ ಮತ್ತು ಸಾಮಾಜಿಕ ಕಾರ್ಯಕರ್ತರ ಕೃಷ್ಣಾರೆಡ್ಡಿ ಮೂದನೂರ ಹೆಸರಿನಲ್ಲಿ ತಂಡವೊಂದನ್ನು ಕಟ್ಟಿಕೊಂಡಿರುವ ಯುವಕರು, ಲಾಕ್ಡೌನ್ ನಲ್ಲಿ ಸಕಾಲಕ್ಕೆ ಆಹಾರ ಸಿಗದೆ ಪರದಾಡುತ್ತಿರುವ ನಿರ್ಗತಿಕರಿಗೆ, ಆಸ್ಪತ್ರೆಯ ರೋಗಿಗಳಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟ ನೀಡುತ್ತಿದ್ದಾರೆ. ಜೊತೆಗೆ ಯಾರೇ ದೂರವಾಣಿ ಕರೆ ಮಾಡಿದರೂ ಅವರು ಇರುವ ಸ್ಥಳಕ್ಕೆ ತೆರಳಿ ಬಿಸಿಯಾದ ಮತ್ತು ಶುಚಿಯಾದ ಊಟದ ಜೊತೆಗೆ ಶುದ್ಧ ಕುಡಿಯುವ ನೀರಿನ ಬಾಟಲ್ ಸಹ ನೀಡುತ್ತಾರೆ.
ಕಳೆದ ಬಾರಿ ಲಾಕ್ಡೌನ್ ಹಿನ್ನೆಲೆ ಸುರಪುರ ಶಾಸಕ ರಾಜೂಗೌಡ ಮತ್ತು ಕೃಷ್ಣಾರೆಡ್ಡಿ ಸುರಪುರ ಮತ್ತು ಹುಣಸಗಿ ತಾಲೂಕಿನಲ್ಲಿ ಹಸಿವಿನಿಂದ ಪರದಾಡುತ್ತಿರುವವರಿಗೆ ಊಟ ನೀಡಿದ್ದರು. ಆದರೆ ಈಗ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಅವರಿಗೆ ಬೇಗ ಗುಣಮುಖವಾಗಲಿ ಮತ್ತು ನಿರ್ಗತಿಕರ ಹೊಟ್ಟೆ ತುಂಬಲಿ ಎಂದು ತಮ್ಮ ಸ್ವಂತ ಖರ್ಚಿನಲ್ಲಿ ಜಾತಿ, ಧರ್ಮವನ್ನು ಮೀರಿ ಊಟ ನೀಡುತ್ತಿದ್ದಾರೆ. ಯುವಕರ ಈ ಕಾರ್ಯಕ್ಕೆ ಕೇಂಭಾವಿ ಪಟ್ಟಣದ ಜನತೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.