ದಾವಣಗೆರೆ: ರಾಜ್ಯದಲ್ಲಿ ಮಹಾಮಾರಿ ಕೊರೊನಾ ವೈರಸ್ ತಾಂಡವವಾಡುತ್ತಿದ್ದು, ಚೈನ್ ಲಿಂಕ್ ಕತ್ತರಿಸುವ ಸಲುವಾಗಿ ರಾಜ್ಯಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಬಿಜೆಪಿ ಶಾಸಕರೊಬ್ಬರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿದ್ದಾರೆ.
ಜಗಳೂರು ಬಿಜೆಪಿ ಶಾಸಕ ಎಸ್ ವ್ಹಿ ರಾಮಚಂದ್ರಪ್ಪ ಅವರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದಾರೆ. ದೇವಸ್ಥಾನಗಳು ಬಂದ್ ಇದ್ದರು ಕೂಡ ದೇವಸ್ಥಾನದ ಬಾಗಿಲು ತೆರೆಸಿ ವಿಶೇಷ ಪೂಜೆ ಅಲ್ಲಿಸಿದ್ದು, ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಮಾಡ್ರಳ್ಳಿ ಗ್ರಾಮದ ಚೌಡೇಶ್ವರಿ ದೇವಿಗೆ ಶಾಸಕರು ಈ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಪತ್ನಿ ಇಂದಿರಾ ರಾಮಚಂದ್ರಪ್ಪ, ಪುತ್ರ ಅಜಯೇಂದ್ರ ಸಿಂಹ ಸೇರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಕೋವಿಡ್ ನಿಂದ ದೇವಸ್ಥಾನಗಳು ಬಂದ್ ಆಗಿದ್ರೂ ಕೂಡ ಶಾಸಕರು ಬಾಗಿಲು ತೆರೆಸಿ ವಿಶೇಷ ಪೂಜೆ ಮಾಡಿರುವುದು ಜನಸಾಮಾನ್ಯರಿಗೊಂದು ನ್ಯಾಯ, ಜನಪ್ರತಿನಿಧಿಗಳಿಗೊಂದು ನ್ಯಾಯವಾ ಅನ್ನೋ ಪ್ರಶ್ನೆ ಮೂಡುವವಂತಾಗಿದೆ.