ಮೈಸೂರು: ಕೊರೊನಾ ಲಾಕ್ಡೌನ್ ನಂತರ ಕಾರ್ಖಾನೆಗೆ ತೆರಳಿದ ಮೊದಲ ದಿನವೇ ಬೈಕಿಗೆ ಕಾರ್ ಡಿಕ್ಕಿ ಹೊಡೆದು ಉದ್ಯೋಗಿ ಮೃತಪಟ್ಟಿರುವ ಘಟನೆ ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ನಂಜನಗೂಡು ಪಟ್ಟಣದ ಶಿಕ್ಷಕರ ಬಡಾವಣೆ ನಿವಾಸಿ ಪ್ರವೀಣ್ (29) ಮೃತ ದುರ್ದೈವಿ. ನಂಜನಗೂಡು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮಲ್ಲನಮೂಲೆ ಮಠದ ಬಳಿ ತಡರಾತ್ರಿ ಈ ಅಪಘಾತ ನಡೆದಿದೆ. ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಾರ್ಖಾನೆಯಲ್ಲಿ ಮೃತ ಪ್ರವೀಣ್ ಕೆಲಸ ಮಾಡುತ್ತಿದ್ದರು.
ಸೋಮವಾರ ಕಾರ್ಖಾನೆಗೆ ಹೋಗಿ ಕೆಲಸ ಮುಗಿಸಿ ವಾಪಸ್ ಬರುತ್ತಿದ್ದಾಗ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇತ್ತ ಬೆಂಗಳೂರಿನ ಏರ್ಪೋರ್ಟ್ ರಸ್ತೆಯ ಸಿಬಿಐ ಸಮೀಪ ರಸ್ತೆಗಿಳಿದ ಮೊದಲ ದಿನವೇ ಕಾರು ಹಾಗೂ ಸ್ಕೂಟರ್ ನಡುವೆ ಅಪಘಾತ ಸಂಭವಿಸಿದೆ. ಕಾರು ಚಲಾಯಿಸುತ್ತಿದ್ದ ಮಹಿಳೆ ಸ್ಕೂಟರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದ ಯುವತಿಯ ಕಾಲಿಗೆ ಗಾಯವಾಗಿದೆ. ನಂತರ ಯುವತಿಯನ್ನ ತನ್ನ ಕಾರಿನಲ್ಲೇ ಮಹಿಳೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಕೊರೊನಾ ಲಾಕ್ಡೌನ್ನಿಂದ ಬಹುದಿನಗಳ ಬಳಿಕ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಕೆಎಸ್ಆರ್ಟಿಸಿ ಬಸ್ ಸಂಚಾರ ಆರಂಭವಾಗಿದೆ. ಪ್ರತಿಯೊಬ್ಬ ಪ್ರಯಾಣಿಕರ ಆರೋಗ್ಯ ತಪಾಸಣೆ, ಅವರ ಹೆಸರು, ವಿಳಾಸದ ದಾಖಲೆಯನ್ನು ಬರೆದುಕೊಳ್ಳಲಾಗುತ್ತಿದೆ. ಇವತ್ತು ಮೈಸೂರಿನಿಂದ ಬೆಂಗಳೂರು ಕಡೆಗೆ ಹೆಚ್ಚಿನ ಬಸ್ ಸಂಚಾರ ಇದೆ.
ಇತ್ತ ಮೈಸೂರಿನಿಂದ ಬೆಂಗಳೂರಿಗೆ ಸಂಜೆ 4 ಗಂಟೆಗೆ ಕೊನೆಯ ಬಸ್. ಸಂಜೆ ಏಳು ಗಂಟೆ ಒಳಗೆ ನಿಗದಿತ ಸ್ಥಳವನ್ನು ಎಲ್ಲರೂ ತಲುಪಲೇಬೇಕಿರುವ ಕಾರಣ ಪ್ರಯಾಣದ ಅವಧಿ ಆಧಾರದ ಮೇಲೆ ಬಸ್ ಸಂಚಾರಕ್ಕೆ ಅಂತಿಮ ಸಮಯ ನಿಗದಿ ಮಾಡಲಾಗಿದೆ. ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿದೆ.