ಹುಬ್ಬಳ್ಳಿ: ಸಣ್ಣ ನೀರಾವರಿ ಇಲಾಖೆಯ ಎಇಇ ದೇವರಾಜ ಕೆ. ಶಿಗ್ಗಾವಿ ಅವರ ನಿವಾಸ ಮತ್ತು ತಾಯಿ ಹಾಗೂ ಮಾವನ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಇಂದು ಬೆಳಗ್ಗೆ ಏಕಕಾಲಕ್ಕೆ ದಾಳಿ ಮಾಡಿದ್ದಾರೆ. ಈ ವೇಳೆ ಲಕ್ಷಗಟ್ಟಲೇ ಹಣ ಮತ್ತು ಚಿನ್ನಾಭರಣ ಪತ್ತೆಯಾಗಿದೆ.
ಆದಾಯಕ್ಕಿಂತ ಹೆಚ್ಚಿನ ಸ್ಥಿರ-ಚಿರಾಸ್ತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ ಬಳಿಕ ಲಾಕರ್ ಪರಿಶೀಲನೆಗೆ ದೇವರಾಜ ಶಿಗ್ಗಾವಿಯನ್ನು ಕರೆದೊಯ್ದಿದ್ದಾರೆ. ಈ ವೇಳೆ ಇಂಡಿಯನ್ ಓವರ್ ಸಿಸ್ ಬ್ಯಾಂಕ್ ಲಾಕರ್ ಪರಿಶೀಲನೆಯಲ್ಲಿ ಕಂತೆ ಕಂತೆ ಹಣ ಹಾಗೂ ಬಂಗಾರದ ಆಭರಣಗಳು ಪತ್ತೆಯಾಗಿವೆ.
56.5 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರದ ಆಭರಣಗಳು, 400 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 23 ಎಕರೆ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ. ಇಇ ದೇವರಾಜ ಪತ್ನಿ ವರ್ಷಾ ಅವರನ್ನು ಎಸಿಬಿ ಅಧಿಕಾರಿಗಳ ಬ್ಯಾಂಕ್ ಲಾಕರ್ ತಗೆಯಲು ಕರೆದುಕೊಂಡು ಹೋಗಿದ್ದಾರೆ. ಇವರಿಬ್ಬರ ಲಾಕರ್ನಲ್ಲೇ 56.50 ಲಕ್ಷ ಹಣ ಹಾಗೂ 400 ಗ್ರಾಂ ಬಂಗಾರ ಪತ್ತೆಯಾಗಿದೆ.
ಈ ಕುರಿತಾಗಿ ಅಧಿಕಾರಿಗಳು ತನಿಖೆಯನ್ನು ಮುಂದುವರೆಸಿದ್ದಾರೆ. ಇನ್ನು ಅಪಾರ ಪ್ರಮಾಣ ಅಕ್ರಮ ಆಸ್ತಿಯ ದಾಖಲೆಗಳನ್ನು ಪತ್ತೆ ಹಚ್ಚಲು ಎಸಿಬಿ ಅಧಿಕಾರಿಗಳು ಪರಿಶೀಲನೆ ಮುಂದುವರೆಸಿದ್ದಾರೆ.