ಯಾದಗಿರಿ: 18 ವರ್ಷ ಮೇಲ್ಪಟ್ಟ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಕೊರೊನಾ ಲಸಿಕೆ ಪಡೆಯಲೇಬೇಕು. ಇಲ್ಲವಾದರೆ ಮುಂದಿನ ವರ್ಷಕ್ಕೆ ಪ್ರವೇಶಾತಿ ನೀಡಬೇಡಿ ಎಂದು ಕಾಲೇಜುಗಳ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ 21,342 ವಿದ್ಯಾರ್ಥಿಗಳು, 1,153 ಬೋಧಕ, 505 ಬೋಧಕೇತರ ಸಿಬ್ಬಂದಿ ಇದ್ದು, ಪ್ರತಿ ಕಾಲೇಜಿನಲ್ಲಿ ಶೇಕಡಾ ನೂರರಷ್ಟು ಲಸಿಕೆಯಲ್ಲಿ ಪ್ರಗತಿ ಸಾಧಿಸಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗೆ ವಾಟ್ಸಪ್ ಸೇರಿದಂತೆ ಇನ್ನಿತರ ವಿಧಾನದಿಂದ ಸಂಪರ್ಕಿಸಿ ಲಸಿಕೆ ಪಡೆಯಲು ತಿಳಿಸಿಬೇಕು ಎಂದು ಕಾಲೇಜು ಆಡಳಿತ ಮಂಡಳಿಗಳಿಗೆ ಡಿಸಿ ತಿಳಿಸಿದ್ದಾರೆ.
ಮುಂದಿನ ಮೂರು ದಿನದೊಳಗೆ ಲಸಿಕಾರಣದಲ್ಲಿ ಶೇ.100ರಷ್ಟು ಪ್ರಗತಿ ಸಾಧಿಸಲು ನೆರವಾಗಬೇಕು. ಈ ಹಿಂದೆ ಶಿಕ್ಷಣ ಇಲಾಖೆಯವರು ಹಲವಾರು ಬಾರಿ ನಮಗೆ ನೆರವಾಗಿದ್ದು, ಅದೇ ರೀತಿಯಾಗಿ ಲಸಿಕಕಾರಣದಲ್ಲಿಯೂ ಸಹ ಸಹಕರಿಸಬೇಕು. ಹಳ್ಳಿಯ ವಿದ್ಯಾರ್ಥಿಗಳು ಲಸಿಕೆ ಪಡೆಯಲು ಸಾರಿಗೆ ವ್ಯವಸ್ಥೆಯನ್ನು ಸಹ ಆಯಾ ತಾಲೂಕು ತಹಶೀಲ್ದಾರ್ ಮೂಲಕ ಜಿಲ್ಲಾಡಳಿತದ ವತಿಯಿಂದ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ.ಆರ್ ಇದೇ ವೇಳೆ ಭರವಸೆ ನೀಡಿದರು.