ಚಿಕ್ಕಮಗಳೂರು: ಆರು ವರ್ಷದಿಂದ ಪ್ರೀತಿಸುತ್ತಿದ್ದ ಹುಡುಗಿಗೆ ಬೇರೆಯೊಬ್ಬನ ಮದುವೆ ಸಿದ್ಧತೆ ನಡೆಯುತ್ತಿರುವುದರಿಂದ ಮನನೊಂದು ಯುವಕ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಗ್ರಾಮದಲ್ಲಿ ನಡೆದಿದೆ.
ರಾಘವೇಂದ್ರ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿಯಾಗಿದ್ದು, ಈತ ಬಣಕಲ್ ಗ್ರಾಮದ ನಿವಾಸಿ. ಕಳೆದ ಆರು ವರ್ಷಗಳಿಂದ ರಾಘವೇಂದ್ರ ಅದೇ ಗ್ರಾಮದ ಯುವತಿಯೋರ್ವಳನ್ನ ಪ್ರೀತಿಸುತ್ತಿದ್ದ. ಅದು ಟು ವೇ ಲವ್ ಕೂಡ ಆಗಿತ್ತು. ಈ ವಿಷಯ ಯುವತಿ ಮನೆಯವರಿಗೂ ಕೂಡ ಗೊತ್ತಿತ್ತಂತೆ. ಆದರೆ ಈವರೆಗೆ ಸುಮ್ಮನಿದ್ದ ಯುವತಿ ಪೋಷಕರು, ಇದ್ದಕ್ಕಿದ್ದಂತೆ ಯುವತಿಗೆ ಬೇರೆ ಮಾಡಲು ಸಿದ್ಧತೆ ನಡೆಸಿದ್ದರು.
ಯುವತಿ ಕೂಡ ಮನೆಯವರ ಒತ್ತಡಕ್ಕೆ ಮಣಿದು ಈ ನಿರ್ಧಾರಕ್ಕೆ ಬಂದಿದ್ದೇನೆ ಕ್ಷಮಿಸು ಅಂತ ಮೇಸೆಜ್ ಮಾಡಿದ್ದಾಳೆ. ಪ್ರೇಯಸಿಯ ಸಂದೇಶದಿಂದ ದುಃಖಿತನಾದ ಯುವಕ ಅತ್ತ ಹುಡುಗಿ ಪೋಷಕರ ನಡೆ ಹಾಗೂ ಇತ್ತ ಆರು ವರ್ಷದ ಪ್ರೀತಿ ಕಳೆದುಕೊಳ್ತೀನಿ ಎಂದು ಮನನೊಂದ ರಾಘವೇಂದ್ರ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಆತ್ಮಹತ್ಯೆ ಯತ್ನಕ್ಕೂ ಮುನ್ನ, ನೀನಿಲ್ಲದೆ ನಾನು ಬದುಕುವುದಿಲ್ಲ. ಬದುಕಲು ಸಾಧ್ಯವೂ ಇಲ್ಲ. ನೀನು ಸಂತೋಷವಾಗಿರು. ಆದರೆ ನಿನ್ನ ಆ ಸಂತೋಷವನ್ನ ನೋಡಲು ನಾನು ಇರುವುದಿಲ್ಲ ಎಂದು ಸುದೀರ್ಘವಾಗಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಳೆದ ಆರು ವರ್ಷಗಳಿಂದ ತನ್ನ ಪ್ರೀತಿಗೆ ಸಪೋರ್ಟ್ ಮಾಡಿದ ಎಲ್ಲರಿಗೂ ಥ್ಯಾಂಕ್ಸ್ ಹೇಳಿ, ಅಪ್ಪ-ಅಮ್ಮನಿಗೆ ಕ್ಷಮೆ ಕೋರಿದ್ದಾನೆ.
ಮುಂದಿನ ತಿಂಗಳು ಹುಡುಗಿ ಪೋಷಕರು ತಮ್ಮ ಮಗಳಿಗೆ ಬೇರೆ ಮದುವೆ ಮಾಡಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. ಕೂಡಲೇ ಯುವಕನ್ನ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನಕ್ಕೆ ವರ್ಗಾವಣೆ ಮಾಡಿದ್ದರು. ಸದ್ಯ ಹಾಸನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರೋ ಯುವಕ ರಾಘವೇಂದ್ರ ಸಾವಿನ ದವಡೆಯಿಂದ ಪಾರಾಗಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.