– ಮತಾಂತರ ನಿಷೇಧ ಕಾಯ್ದೆಯ ಅಗತ್ಯವಿದೆ
ಚಿಕ್ಕಮಗಳೂರು: ಲವ್ ಜಿಹಾದ್ ಹೆಸರಲ್ಲಿ ದೇಶದಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ಲವ್ ಜಿಹಾದ್ ಈಗ ಕೇವಲ ಪ್ರೀತಿ-ಪ್ರೇಮ-ಮದುವೆಯಾಗಿ ಉಳಿದಿಲ್ಲ, ಇದು ಭಯೋತ್ಪಾದನೆ ಮತ್ತೊಂದು ಮುಖವಾಗಿದ್ದು, ಒಂದು ಕೋಮಿನ ಜನಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಲವ್ ಜಿಹಾದ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಗರದ ನಗರಸಭೆಯಲ್ಲಿ ಮಾತನಾಡಿದ ಅವರು, ಅವರೇ ಬೇರೆ-ಬೇರೆ ಭಾಗದಲ್ಲಿ ಅವರ ಪ್ರಾರ್ಥನಾಲಯದಲ್ಲಿ ಭಾಷಣ ಮಾಡಿರುವುದು, ಮಾತನಾಡಿರುವುದು ಈಗ ಬೆಳಕಿಗೆ ಬರುತ್ತಿದೆ. ಓವೈಸಿ ರೀತಿಯ ಕೋಮುವಾದಿಗಳು ಇದನ್ನು ಓಪನ್ ಆಗಿ ಮಾತನಾಡುವಂತದ್ದು ಆರಂಭವಾಗಿದೆ. ನಿನ್ನೆ ಕೂಡ ಉಡುಪಿಯಲ್ಲಿ 17 ವರ್ಷದ ಮೈನರ್ ಯುವತಿಯನ್ನ ಯುವಕ ಕರೆದುಕೊಂಡು ಹೋಗಿ ನಾಪತ್ತೆಯಾಗಿದ್ದಾನೆ ಎಂದರು.
ಇದರ ಹಿಂದೆಯೂ ವ್ಯವಸ್ಥಿತ ಷಡ್ಯಂತ್ರ ನಡೆದಿದೆ. ಮೊದಲೇ ಪ್ಲ್ಯಾನ್ ಆಗಿದೆ. ಮೊಬೈಲ್ ಮನೆಯಲ್ಲೇ ಬಿಟ್ಟು ಹೋಗಬೇಕು. ಯಾವ ಬಸ್ಸಲ್ಲಿ ಹೋಗಬೇಕು. ಯಾವ ಕಾರಲ್ಲಿ ಹೋಗಬೇಕು. ರಾಜ್ಯದ ಬಾರ್ಡರ್ ಗೆ ಎಲ್ಲಿಗೆ ಹೋಗಬೇಕು. ಎಲ್ಲ ವ್ಯವಸ್ಥಿತ ಷಡ್ಯಂತ್ರ ಮಾಡಿದ್ದಾರೆ. ಚಿಕ್ಕ-ಚಿಕ್ಕ ಹೆಣ್ಣು ಮಕ್ಕಳನ್ನು ಪ್ರಚೋದನೆಗೆ ಒಳಪಡಿಸಿ ಹಣದ ಆಮಿಷ ತೋರಿಸಿ ಲವ್ ಜಿಹಾದ್ ಹೆಸರಲ್ಲಿ ಸಮಾಜ ಪರಿವರ್ತನೆಯ ಒಂದು ಷಡ್ಯಂತ್ರ ನಡೆಯುತ್ತಿದೆ. ಆದ್ದರಿಂದ ಕರ್ನಾಟಕದ ಕರಾವಳಿ ಭಾಗ ಹಾಗೂ ಬೆಂಗಳೂರು ಸೇರಿದಂತೆ ಬೇರೆ-ಬೇರೆ ಭಾಗದಲ್ಲಿ ಈ ರೀತಿಯ ಷಡ್ಯಂತ್ರ ತಡೆಯಬೇಕು. ಲವ್ ಜಿಹಾದ್ ತಡೆಯಬೇಕು ಅಂದ್ರೆ ಕಠಿಣ ಮತಾಂತರ ನಿಷೇಧ ಕಾಯ್ದೆಯ ಅಗತ್ಯ ಇದೆ ಎಂದಿದ್ದಾರೆ.
ಕರ್ನಾಟಕದಲ್ಲಿ ಅತ್ಯಂತ ವೇಗವಾಗಿ ಈ ಕೆಲಸ ನಡೆಯಬೇಕಿದೆ. ಹಣದ ಆಮಿಷದಲ್ಲಿ ಏನು ಬೇಕಾದರೂ ಮಾಡಬಹುದು ಎಂಬ ಕುತಂತ್ರವನ್ನು ಒಂದು ಕೋಮಿನ ಜನ ಮಾಡುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳ ಇದಕ್ಕೆ ಬಲಿಯಾಗುತ್ತಿರುವ ಸಂದರ್ಭದಲ್ಲಿ ಮತಾಂತರ ನಿಷೇಧ ಕಾಯ್ದೆಯನ್ನು ಆದಷ್ಟು ಬೇಗ ಜಾರಿಗೆ ತರಬೇಕು. ಉತ್ತರ ಪ್ರದೇಶ, ಮಧ್ಯಪ್ರದೇಶದಲ್ಲಿ ಯಾವುದನ್ನ ಮಾಡಲು ಸಾಧ್ಯವಿದೆಯೋ ಅದನ್ನ ಕರ್ನಾಟಕದಲ್ಲೂ ಮಾಡಲು ಸಾಧ್ಯವಿದೆ, ಆದಷ್ಟು ಬೇಗ ಸರ್ಕಾರ ಈ ಕೆಲಸವನ್ನ ಮಾಡಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ತಮಿಳುನಾಡು, ಕೇರಳದ ಗಡಿ ಇರುವಾಗ ಬಹಳ ದೊಡ್ಡ ಪ್ರಮಾಣದಲ್ಲಿ ನಮ್ಮ ಹೆಣ್ಣು ಮಕ್ಕಳನ್ನು ಕೇರಳದ ಪೊನ್ನಾಣಿ, ಮಣಪ್ಪುರಂಗೆ ಸಾಗಿಸುವುದು ಬೆಳಕಿಗೆ ಬರುತ್ತಿದೆ. ಆದ್ದರಿಂದ ಆದಷ್ಟು ಬೇಗ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.