– ಮುಸ್ಲಿಂ ಪುರುಷರಿಗೆ ಕಿರುಕುಳ ನೀಡಲು ಕಾನೂನು ಬಳಸಲಾಗುತ್ತಿದೆ
ನವದೆಹಲಿ: ಲವ್ ಜಿಹಾದ್ ಕಾನೂನಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಮುಸ್ಲಿಂ ಪುರುಷರಿಗೆ ಕಿರುಕುಳ ನೀಡಲು ಗೂಂಡಾಗಳು ಈ ಕಾನೂನನ್ನು ಬಳಸುತ್ತಿದ್ದಾರೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮುಸ್ಲಿಂ ಪುರುಷರನ್ನು ಜೈಲಿಗೆ ಹಾಕುವ ಮೂಲಕ ಯಾವ ಸಮುದಾಯದ ಹಿತಾಸಕ್ತಿಗಳನ್ನು ತೃಪ್ತಿಪಡಿಸಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಮುಸ್ಲಿಂ ಪುರುಷರಿಗೆ ಕಿರುಕುಳ ನೀಡಲು ಗೂಂಡಾಗಳು ಈ ಕಾನೂನನ್ನು ಬಳಸುತ್ತಿದ್ದಾರೆ. ಇದರಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಇಲ್ಲ. ಇವರು ಜನರ ಉದ್ಧಾರಕ್ಕಾಗಿ ಏನೂ ಮಾಡುವುದಿಲ್ಲ. ಆದರೆ ಕ್ರಿಮಿನಲ್ ಜನ ಸಮೂಹ ಖಾಸಗಿ ಜೀವನದಲ್ಲಿ ಮತ್ತಷ್ಟು ಹಸ್ತಕ್ಷೇಪ ಮಾಡಲು ಅವಕಾಶ ನೀಡಿದಂತಾಗಿದೆ ಎಂದು ಅವರು ದೂರಿದ್ದಾರೆ.
ಉತ್ತರ ಪ್ರದೇಶದಲ್ಲಿ ನವೆಂಬರ್ 28ರಿಂದ ಲವ್ ಜಿಹಾದ್ ಕಾನೂನು ಜಾರಿಗೆ ತರಲಾಗಿದ್ದು, ಈ ವರೆಗೆ 14 ಪ್ರಕರಣಗಳು ದಾಖಲಾಗಿವೆ. ಒಟ್ಟು 54 ಜನರನ್ನು ಬಂಧಿಸಲಾಗಿದ್ದು, 49 ಜನ ಇನ್ನೂ ಜೈಲಿನಲ್ಲಿದ್ದಾರೆ.
ಉತ್ತರ ಪ್ರದೇಶ ಸರ್ಕಾರದ ಲವ್ ಜಿಹಾದ್ ಕಾನೂನು ಪ್ರಶ್ನಿಸಿ ಜಮಿಯತ್ ಉಲಮಾ-ಎ-ಹಿಂದ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ಮುಸ್ಲಿಂ ಪುರುಷರನ್ನು ರಾಕ್ಷಸೀಕರಿಸುವುದಕ್ಕಾಗಿ ಈ ಕಾನೂನು ರೂಪಿಸಲಾಗಿದೆ ಎಂದು ಆರೋಪಿಸಿದೆ.