ಹುಬ್ಬಳ್ಳಿ: ರೌಡಿಶೀಟರ್ ಫ್ರೂಟ್ ಇರ್ಫಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆ ಹುಬ್ಬಳ್ಳಿ ಠಾಣೆ ಪೊಲೀಸರು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಿಂದ ಬಂಧಿತರ ಸಂಖ್ಯೆ ಏಳಕ್ಕೇರಿದಂತಾಗಿದೆ. ಬಂಧಿತರಿಬ್ಬರು ಬಚ್ಚಾಖಾನ್ ಸಹಚರರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೈಸೂರಿನ ಶಿವರಾತ್ರಿ ಶೇಶ್ವನಗರದ ಬನ್ನಿಮಂಟಪ ಲೇಔಟ್ ನ ಶಹಜಾನ ಆಶ್ರಫ್. ಕೆ (24) ಹಾಗೂ ಮೈಸೂರು ಗಾಂಧಿನಗರದ ಸೈಯದ್ ಸೋಹೈಲ್ ಪೀರ್ ಸೈಯದ ಆಜೀಮ್ ಪೀರ್ (22) ಬಂಧಿತರು. ಆರೋಪಿಗಳಿಂದ ಎರಡು ಮೊಬೈಲ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಧಾರವಾಡದ ರೌಡಿಶೀಟರ್ ಪ್ರೂಟ್ ಇರ್ಫಾನ್ ಮೇಲೆ ಅಗಸ್ಟ್ 6ರಂದು ಹಳೆ ಹುಬ್ಬಳ್ಳಿಯ ಕಲ್ಯಾಣ ಮಂಟಪದ ಬಳಿ ಗುಂಡಿನ ದಾಳಿ ನಡೆಸುವ ಮೂಲಕ ಹತ್ಯೆ ನಡೆಸಲಾಗಿತ್ತು. ಹತ್ಯೆಯಾದ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಇದೂವರೆಗೆ 7 ಜನರನ್ನು ಬಂಧಿಸಿದ್ದಾರೆ. ಅಲ್ಲದೆ ಈ ಗುಂಡಿನ ದಾಳಿ ಪ್ರಕರಣದಲ್ಲಿ ಬಾಂಬೆ ಮೂಲದ ಶಾರ್ಪ್ ಶೂಟರ್ ಗಳು ಪರಾರಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ. ಘಟನೆಯ ಕುರಿತು ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.