– ರಾಜ್ಯ ಮುಖ್ಯ ಕಾರ್ಯದರ್ಶಿಗೆ ರಾಜಿನಾಮೆ ಪತ್ರ ಬರೆದ ಶಿಲ್ಪಾನಾಗ್
– ಅವರು ತುಂಬಾ ಚೀಫ್ ಮೆಂಟಾಲಿಟಿ ಅಧಿಕಾರಿ, ಮೈಸೂರು ಬಿಟ್ಟು ತೊಲಗಿ
ಮೈಸೂರು: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್ಆರ್ ಫಂಡ್ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.
ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದ್ದು, ಅವರ ಇಗೋಯಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದ್ದು, ಚೀಫ್ ಸೆಕ್ರಟರಿ ಸ್ಥಾನ ರಾಜೀನಾಮೆ ನೀಡುತ್ತಿರುವ ವಿಷಯವನ್ನ ತಿಳಿಸಿ ಭಾವುಕರಾದರು.
ಈ ರೀತಿಯ ಜಿಲ್ಲಾಧಿಕಾರಿ ಯಾವುದೇ ಜಿಲ್ಲೆಗೂ ಸಿಗಬಾರದು. ಟಾರ್ಗೆಟ್ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ಮೈಸೂರು ಜಿಲ್ಲೆ ಬಿಟ್ಟು ತೊಲಗಿ, ತುಂಬಾ ಚೀಪ್ ಮೆಂಟಾಲಿಟಿ ಅಧಿಕಾರಿ ಅವರು. ಒಳ್ಳೆಯ ಜನರು ಇರೋ ಮೈಸೂರು ನಗರದಲ್ಲಿ ಜಿಲ್ಲಾಧಿಕಾರಿಗಳು ಈ ರೀತಿ ಗಲೀಜು ಎಬ್ಬಿಸುತ್ತಿದ್ದಾರೆ. ಯಾಕೆ ಈ ರೀತಿ ಹಠ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾನು 2014ನೇ ಬ್ಯಾಚ್ ಅಧಿಕಾರಿ, ಅವರು 2009 ನೇ ಬ್ಯಾಚ್ ಅಧಿಕಾರಿ. ನನ್ನ ಮೇಲಿನ ಅವರ ದ್ವೇಷ ಮೈಸೂರು ಜನರ ಮೇಲೆ ಪರಿಣಾಮ ಆಗೋದು ಬೇಡ. ನಾನೇ ಸುಪ್ರೀಂ ಅಂತಾ ಅಧಿಕಾರಿಗಳ ಸಭೆಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಹಿರಿಯ ಅಧಿಕಾರಿಗಳಿಗೆ ಗೌರವ ಕೊಡದೆ ಅಧಿಕಾರಿಗಳನ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.