ಅಬುಧಾಬಿ: ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರು ಅನುಪಸ್ಥಿತಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕಾಡುತ್ತಿದೆ ಎಂದು ಕೋಚ್ ಸ್ಟೀಫನ್ ಫ್ಲೆಮಿಂಗ್ ಹೇಳಿದ್ದಾರೆ.
ಐಪಿಎಲ್-2020ಯಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ನಿರಾಸೆಯ ಪ್ರದರ್ಶನ ತೋರುತ್ತಿದೆ. ಮೂರು ಬಾರಿ ಕಪ್ ಗೆದ್ದಿರುವ ಚಾಂಪಿಯನ್ ತಂಡ ಈ ಬಾರಿ ಆಡಿದ ಮೂರು ಪಂದ್ಯಗಳಲ್ಲಿ ಮೊದಲ ಪಂದ್ಯದಲ್ಲಿ ಬಿಟ್ಟರೆ ಉಳಿದ ಎರಡು ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಈಗ ತಂಡದ ಸ್ಥಿತಿಯ ಬಗ್ಗೆ ಕೋಚ್ ಫ್ಲೆಮಿಂಗ್ ಮಾತನಾಡಿದ್ದಾರೆ.
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ನಾವು ಕೀ ಪ್ಲೇಯರ್ಸ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ತಂಡವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗಿದೆ. ರೈನಾ, ರಾಯುಡು ಅವರು ಇಲ್ಲದೇ ಬ್ಯಾಟಿಂಗ್ ಲೈನ್ಅಫ್ ಅನ್ನು ಸೆಟ್ ಮಾಡುವುದು ಕಷ್ಟವಾಗಿದೆ. ಹೀಗಾಗಿ ಹೊಸ ಹೊಸ ಆಟಗಾರರಿಗೆ ಚಾನ್ಸ್ ಕೊಡುತ್ತಿದ್ದೇವೆ. ಈ ಮೂಲಕ ಟೂರ್ನಿಯ ಆರಂಭದಲ್ಲೇ ಬ್ಯಾಟಿಂಗ್ ಕ್ರಮವನ್ನು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ ಎಂದು ಫ್ಲೆಮಿಂಗ್ ತಿಳಿಸಿದ್ದಾರೆ.
ನಮ್ಮ ತಂಡದಲ್ಲಿ ಬಹಳ ಆಟಗಾರರು ಇದ್ದಾರೆ. ಆದರೆ ಅವರನ್ನು ಜೋಡಣೆ ಮಾಡುವಲ್ಲಿ ನಮಗೆ ಸ್ವಲ್ಪ ಗೊಂದಲವಿದೆ. ಹೀಗಾಗಿ ಆ ಗೊಂದಲಕ್ಕೆ ಪರಿಹಾರ ಹುಡುಕುತ್ತಿದ್ದೇವೆ. ಟಾಪ್ ಆರ್ಡರ್ ನಲ್ಲಿ ಒಳ್ಳೆಯ ಆಟಗಾರರು ಮಿಸ್ ಆಗಿದ್ದಾರೆ. ಇದರಿಂದ ಬ್ಯಾಟಿಂಗ್ ಕ್ರಮಾಂಕ ಜೋಡಣೆ ಆಗುತ್ತಿಲ್ಲ. ಮುಂದಿನ ಪಂದ್ಯಕ್ಕೆ ಇನ್ನೂ ಆರು ದಿನ ಬಾಕಿಯಿದ್ದು, ನಾವು ಉತ್ತಮ ಆಟಗಾರರು ಮತ್ತು ತಂಡದೊಂದಿಗೆ ಕಮ್ಬ್ಯಾಕ್ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಟೂರ್ನಿಗೂ ಮೊದಲೇ ಚೆನ್ನೈ ತಂಡದ ಸ್ಟಾರ್ ಆಟಗಾರನಾದ ಸುರೇಶ್ ರೈನಾ ಅವರು ವೈಯಕ್ತಿಕ ಕಾರಣದಿಂದ ಟೂರ್ನಿಯಿಂದ ಹೊರಬಂದಿದ್ದರು. ಇದರ ಜೊತೆಗೆ ಮೊದಲ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಅಂಬಾಟಿ ರಾಯುಡು ಅವರು ಕೂಡ ಗಾಯದ ಸಮಸ್ಯೆಯಿಂದ ಪಂದ್ಯಗಳಿಂದ ದೂರ ಉಳಿದಿದ್ದಾರೆ. ಇದರ ನಡುವೆ ತಂಡದಲ್ಲಿ ಸ್ಪಿನ್ನರ್ ಗಳ ಕೊರೆತೆ ಇದೆ. ಅನುಭವಿ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಕೂಡ ಟೂರ್ನಿಯಿಂದ ಹೊರ ಉಳಿದಿದ್ದಾರೆ.
ನಿನ್ನೆ ನಡೆದ ಪಂದ್ಯದಲ್ಲಿ ಚೆನ್ನೈ ಹೀನಾಯವಾಗಿ ಸೋತ್ತಿತ್ತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಬಂದ ಡೆಲ್ಲಿ ಕ್ಯಾಪಿಟಲ್ ತಂಡ ಪೃಥ್ವಿ ಶಾ ಅವರು ಭರ್ಜರಿ ಅರ್ಧಶತಕ ಮತ್ತು ಪಂತ್ ಅವರ ಸೂಪರ್ ಬ್ಯಾಟಿಂಗ್ ಫಲದಿಂದ ನಿಗದಿತ 20 ಓವರಿನಲ್ಲಿ 175 ರನ್ ಟಾರ್ಗೆಟ್ ನೀಡಿತ್ತು. ಈ ಮೊತ್ತವನ್ನು ಬೆನ್ನತ್ತಿದ್ದ ಚೆನ್ನೈ ಆರಂಭದಿಂದಲೂ ಮಂದಗತಿಯ ಬ್ಯಾಟಿಂಗ್ಗೆ ಮುಂದಾಗಿತ್ತು. ಪರಿಣಾಮ ನಿಗದಿತ 20 ಓವರಿನಲ್ಲಿ ಕೇವಲ 131 ಗಳಿಸಿ ಟೂರ್ನಿಯಲ್ಲಿ ಎರಡನೇ ಸೋಲು ಕಂಡಿತು.