ಚಂಡೀಗಢ: ರೈತ ಹೋರಾಟದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದ ಶಿಮ್ಲಾದ ರೈತರೊಬ್ಬರು ಪ್ರಧಾನಿ ಮೋದಿಯವರ ತಾಯಿಗೆ ಪತ್ರ ಬರೆದು ಪರಿಸ್ಥಿತಿಯನ್ನು ಅರ್ಥಮಾಡಿಸುವಂತೆ ಮನವಿ ಮಾಡಿಕೊಂಡಿದ್ದಾನೆ.
ಫೀರೊಜ್ಪುರದ ಹರ್ ಪ್ರೀತ್ ಸಿಂಗ್ ಪತ್ರ ಬರೆದ ರೈತ. ಹರ್ ಪ್ರೀತ್ ಕೆಲ ದಿನಗಳ ಹಿಂದೆ ಶಿಮ್ಲಾದಲ್ಲಿ ನಡೆದ ರೈತರ ಹೋರಾಟದಲ್ಲಿ ಭಾಗಿಯಾಗಿ ಬಂಧನಕ್ಕೆ ಒಳಗಾಗಿದ್ದರು. ನಂತರ ಬಿಡುಗಡೆ ಹೊಂದಿ ಇದೀಗ ಮೋದಿಯವರ ತಾಯಿಗೆ ಭಾವನಾತ್ಮಕ ಸಂದೇಶ ಇರುವ ಪತ್ರ ಬರೆದು ರೈತರ ವಿರೋಧ ಇರುವ ಮೂರು ಕಾಯ್ದೆಯ ಬಗ್ಗೆ ಮೋದಿಯವರಿಗೆ ಮನವರಿಕೆ ಮಾಡಿಸುವಂತೆ ತಿಳಿಸಿದ್ದಾರೆ.
ಹರ್ ಪ್ರೀತ್ ಮೋದಿಯವರ ತಾಯಿ ಹಿರಾಬೆನ್ ಅವರಿಗೆ ಪತ್ರ ಬರೆದು ರೈತ ವಿರೋಧ ಇರುವ ಮೂರು ಕಾಯ್ದೆಗಳನ್ನು ಹಿಂಪಡೆಯುವಂತೆ ನಿಮ್ಮ ಮಗ ಪ್ರಧಾನಿ ಮೋದಿಯವರಿಗೆ ನೀವು ಮನವಿ ಮಾಡಿಕೊಳ್ಳಿ. ಆಗ ಅವರು ತಾಯಿಯ ಮಾತನ್ನು ಕೇಳಿಯಾದರು ಹಿಂಪಡೆಯಲು ನಿರ್ಧರಿಸಬಹುದು. ಭಾರತೀಯರು ತಾಯಿಯನ್ನು ದೇವರಾಗಿ ಕಾಣುತ್ತಾರೆ. ಹಾಗಾಗಿ ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಸಾವಿರಾರೂ ರೈತರು ಕೊರೆಯುವ ಚಳಿಯಲ್ಲಿ ದೆಹಲಿಯ ಗಡಿ ಪ್ರದೇಶದಲ್ಲಿ ಹೋರಾಟ ಮಾಡುತ್ತಿದ್ದಾರೆ ಅವರ ಬಗ್ಗೆ ಒಮ್ಮೆ ಯೋಚಿಸಿ ಆ ಕಾಯ್ದೆಯನ್ನು ಹಿಂಪಡೆಯುವಂತೆ ಮನವಿ ಮಾಡಿ ಎಂದಿದ್ದಾರೆ.
ಶಿಮ್ಲಾದಲ್ಲಿ ಅನುಮತಿ ಇಲ್ಲದೆ ನಡಸಿದ ಪ್ರತಿಭಟನೆಗಾಗಿ ಹರ್ ದೀಪ್, ಕರಣ್ದೀಪ್ ಸಂಧು ಮತ್ತು ಗುರ್ ದೀಪ್ ಸಿಂಗ್ ಅವರನ್ನು ಪಂಜಾಬ್ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 107ರ ಪ್ರಕಾರ ಬಂಧಿಸಿದ್ದರು.