ಶಿವಮೊಗ್ಗ: ರಾಜ್ಯದಲ್ಲಿ ಈ ಬಾರಿ ಮಂಡಿಸಲಿರುವ ಬಜೆಟ್ ರೈತರ ಪರವಾಗಿ ಹೆಚ್ಚಿನ ಆದ್ಯತೆಯನ್ನು ನೀಡುತ್ತೇನೆ ಎನ್ನುವ ಮೂಲಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.
ಶಿಕಾರಿಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸಿಎಂ ಬಿಎಸ್ವೈ, ಈ ಬಾರಿ ಬಜೆಟ್ ರೈತಪರವಾಗಿ ಇರಲು ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ರೈತರ ಪರವಾಗಿಯೇ ಇರಲಿದೆ. ರಾಜ್ಯದಲ್ಲಿ ಮೀಸಲಾತಿಗೆ ಆಗ್ರಹಿಸಿ ಹಲವು ಸಮುದಾಯಗಳು ಹೋರಾಟ ನಡೆಸುತ್ತಿವೆ. ಅವರ ಹೋರಾಟವನ್ನು ನಾನು ಸ್ವಾಗತಿಸುತ್ತೇನೆ. ಅವರ ಹೋರಾಟ ನ್ಯಾಯ ಬದ್ಧವಾಗಿದೆ. ಕಾನೂನು ಚೌಕಟ್ಟಿನಲ್ಲಿ, ಸಂವಿಧಾನದ ಚೌಕಟ್ಟಿನಲ್ಲಿ ಏನೇನು ಸಾಧ್ಯ ಇದೆಯೋ ಅದನ್ನು ಕಾರ್ಯ ರೂಪಕ್ಕೆ ತರಲಾಗುವುದು ಎಂದರು.
ಮೀಸಲಾತಿ ಪರವಾದ ಹೋರಾಟ ನ್ಯಾಯ ಬದ್ಧವಾಗಿ ಇರುವುದರಿಂದ ಅವರ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಅತೀ ಶೀಘ್ರವಾಗಿ ಇದಕ್ಕೊಂದು ತುದಿ ಮುಟ್ಟಿಸಿ ಅವರ ಹೋರಾಟಕ್ಕೆ ಬೆಲೆ ಸಿಗುವ ರೀತಿ ಮಾಡಲು ಕೈಲಾದ ಸಹಾಯ ಮಾಡುವುದಾಗಿ ಹೋರಾಟ ಮಾಡುತ್ತಿರುವ ಎಲ್ಲಾ ಸ್ವಾಮೀಜಿಗಳಿಗೆ ಭರವಸೆ ನೀಡಿದರು.