ಹಾವೇರಿ: ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಚಿರತೆ ಬಿದ್ದ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಅರಳೀಕಟ್ಟಿ ಗ್ರಾಮದ ಬಳಿ ಇರುವ ಗುಡ್ಡದಲ್ಲಿ ನಡೆದಿದೆ.
ಕಳೆದ ಕೆಲವು ದಿನಗಳಿಂದ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿ ಚಿರತೆ ಓಡಾಡಿಕೊಂಡಿತ್ತು. ಇದರಿಂದ ರೈತರು ಹಾಗೂ ಗ್ರಾಮದ ಜನರು ಸಂಜೆಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದರು.
ಇಂದು ಅರಣ್ಯ ಇಲಾಖೆಯು ಇರಿಸಿದ ಬೋನಿಗೆ ಎರಡು ವರ್ಷದ ಗಂಡು ಚಿರತೆ ಬಿದ್ದಿದೆ. ಚಿರತೆ ಬೋನಿಗೆ ಬಿದ್ದಿದ್ದರಿಂದ ಅರಳೀಕಟ್ಟಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನ ಅರಣ್ಯ ಇಲಾಖೆಯ ಸಿಬ್ಬಂದಿ ಅರಣ್ಯಕ್ಕೆ ಬಿಡಲು ತೆಗೆದುಕೊಂಡು ಹೋಗಿದ್ದಾರೆ.