ಬೆಂಗಳೂರು: ಇಂದು ರಾಷ್ಟ್ರವ್ಯಾಪಿ ರೈತರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜಕಾರಣಿಗಳು, ಸೆಲೆಬ್ರಿಟಿಗಳು ಸೇರಿದಂತೆ ಎಲ್ಲರೂ ರೈತರಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಈ ನಡುವೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರು ವಿಶೇಷವಾಗಿ ರೈತರನ್ನು ಬೆಂಬಲಿಸುವ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ.
ಹೌದು, ಮೋಹಕ ತಾರೆ ರಮ್ಯಾ ಅವರು ಇಂದು ಮಧ್ಯಾಹ್ನದ ಊಟವನ್ನು ತ್ಯಜಿಸುವ ಮೂಲಕ ರೈತರಿಗೆ ತಮ್ಮ ಸಂಪೂರ್ಣ ಬೆಂಬಲ ನೀಡಿದ್ದಾರೆ. ಈ ಸಂಬಂಧ ಇನ್ಸ್ಟಾ ಸ್ಟೋರಿಯಲ್ಲಿ ಬರೆದುಕೊಂಡಿರುವ ದಿವ್ಯ ಸ್ಪಂದನ, ಕಿಸಾನ್ ದಿವಸವಾಗಿರುವ ಇಂದು ರೈತರಿಗೆ ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ನಾನು ಮಧ್ಯಾಹ್ನ ಊಟವನ್ನು ತ್ಯಜಿಸುತ್ತಿದ್ದೇನೆ. ಕೇಂದ್ರದ ಕೃಷಿ ನೀತಿಯನ್ನು ವಿರೋಧಿಸಿ ರೈತರು ಆಗಸ್ಟ್ 9ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಮೋದಿ ಸರ್ಕಾರ ಮಾತ್ರ ನಿಶ್ಚಿಂತೆತೆಯಿಂದ ಇದ್ದು, ಕಾನೂನು ರದ್ದುಗೊಳಿಸಲು ನಿರಾಕರಿಸಿದೆ. ಮೋದಿ ಸರ್ಕಾರ ರೈತರ ಪರ ಇರುವ ಬದಲು ತಮ್ಮ ಕಾರ್ಪೋರೇಟ್ ಸ್ನೇಹಿತರನ್ನು ಮಾತ್ರ ಬೆಂಬಲಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಮತ್ತೊಂದು ಪೋಸ್ಟ್ ನಲ್ಲಿ, ಉತ್ತರಪ್ರದೇಶದಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕೈಟ್ ಅವರು, ದೇಶಾದ್ಯಂತ ರೈತರ ದಿನದಂದು ಮಧ್ಯಾಹ್ನ ಊಟವನ್ನು ತ್ಯಜಿಸಬೇಕು ಎಂದು ಕರೆ ನೀಡಿದ್ದಾರೆ. ಮೋದಿ ಸರ್ಕಾರದ ರೈತ ವಿರೋಧಿ ನೀತಿಯಿಂದ ಇಡೀ ದೇಶಕ್ಕೆ ಅನ್ನ ನೀಡುವ ಅನ್ನದಾತರು ಇಂದು ಹಸಿದಿದ್ದಾರೆ. ಈ ಹಿನ್ನೆಲೆಯಲ್ಲಿ ರೈತರ ದಿನಾಚರಣೆಯಂದು ಮನೆಯಲ್ಲಿ ಅಡುಗೆ ಮಾಡದೆ ರೈತರಿಗೆ ಬೆಂಬಲ ನೀಡಿ ಎಂದು ಹೇಳಿರುವುದಾಗಿ ರಮ್ಯಾ ಬರೆದುಕೊಂಡಿದ್ದಾರೆ.
ನಟ ದರ್ಶನ್ ಕೂಡ ರೈತರ ದಿನಾಚರಣೆಯ ಪ್ರಯುಕ್ತ ಶುಭಾಶಯ ತಿಳಿಸಿದ್ದು, ರೈತರು ನಿಜವಾದ ವೀರರಾಗಿದ್ದಾರೆ ಏಕೆಂದರೆ ಅವರ ಸಮರ್ಪಣೆ ಮತ್ತು ಶ್ರಮದಿಂದ, ಬಂಜರು ಭೂಮಿಯನ್ನು ಆಹಾರವನ್ನು ಉತ್ಪಾದಿಸುವ ಭೂಮಿಯಾಗಿ ಪರಿವರ್ತಿಸಿ ಅವರು ತಮ್ಮ ಹೃದಯ ಮತ್ತು ಆತ್ಮವನ್ನು ಮಣ್ಣಿನಲ್ಲಿ ಇರಿಸಿ ಅದನ್ನು ಜೀವಿಸಲು ಮತ್ತು ನಮಗೆ ಆಹಾರವನ್ನು ಕೊಡುತ್ತಾರೆ. ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ. ರೈತ ದಿನಾಚರಣೆಯ ಶುಭಾಶಯಗಳು ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ದೇಶದ 5ನೇ ಪ್ರಧಾನಿ ಮತ್ತು ರೈತ ನಾಯಕ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನವಾದ ಡಿಸೆಂಬರ್ 23 ರಂದು ಪ್ರತಿವರ್ಷ ರಾಷ್ಟ್ರೀಯ ರೈತ ದಿನವನ್ನಾಗಿ ಆಚರಿಸಲಾಗುತ್ತಿದೆ. ಚರಣ್ ಸಿಂಗ್ ರವರು ತಮ್ಮ ಅವಧಿಯಲ್ಲಿ ದೇಶದ ಅನ್ನದಾತರ ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಹತ್ತಾರು ನೀತಿಗಳನ್ನು ಜಾರಿಗೆ ತಂದಿದ್ದಾರೆ. ಆಧುನಿಕ ಕೃಷಿ ಪದ್ಧತಿ ಅಳವಡಿಕೆಗೆ ಪ್ರೋತ್ಸಾಹ ನೀಡಿದ್ದರು. ಅವರು ಸ್ವತಹಃ ರೈತ ಕುಟುಂಬಕ್ಕೆ ಸೇರಿದವರಾಗಿದ್ದರಿಂದ ರೈತರ ಕಷ್ಟಗಳನ್ನು ಅರಿತವರಾಗಿದ್ದರು. ಒಟ್ಟಿನಲ್ಲಿ ಭಾರತದ ಗ್ರಾಮೀಣ ಜನಸಂಖ್ಯೆಯ ಶೇ.80 ಕ್ಕಿಂತ ಹೆಚ್ಚು ಜನರಿಗೆ ಕೃಷಿಯೇ ಆದಾಯದ ಮುಖ್ಯ ಮೂಲವಾಗಿದೆ. ರೈತ ದಿನ ಅಥವಾ ರಾಷ್ಟ್ರೀಯ ರೈತ ದಿನಾಚರಣೆ ಅಥವಾ ಕಿಸಾನ್ ದಿವಸ್ ಅನ್ನು ಪ್ರತಿವರ್ಷ ಡಿಸೆಂಬರ್ 23 ರಂದು ರಾಷ್ಟ್ರವ್ಯಾಪಿ ಆಚರಿಸಲಾಗುತ್ತದೆ.
ಅವರ ಪ್ರಯತ್ನಕ್ಕೆ ಧನ್ಯವಾದಗಳು ಮತ್ತು ಅವರ ಕಠಿಣ ಪರಿಶ್ರಮಕ್ಕೆ ನಮಸ್ಕರಿಸೋಣ…. ರೈತ ದಿನಾಚರಣೆಯ ಶುಭಾಶಯಗಳು pic.twitter.com/gvnPKEuJvZ
— Darshan Thoogudeepa (@dasadarshan) December 23, 2020