ಬಾಗಲಕೋಟೆ: ರೆಮ್ಡಿಸಿವಿರ್ ಕಾಳಸಂತೆಕೋರರಿಗೆ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದ್ದು, ಜಾಮೀನು ಕೋರಿ ಸಲ್ಲಿಸಿದ್ದ 11 ಆರೋಪಿಗಳ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಬಾಗಲಕೋಟೆ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಕಾಶ ವಿ. ಮಹತ್ವದ ನಿರ್ಧಾರ ಕೈಗೊಂಡಿದ್ದು, 11 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ರೆಮ್ಡಿಸಿವಿರ್ ಕಾಳಸಂತೆಯಲ್ಲಿ ಮಾರಾಟ ಮಾಡುವುದು ಗಂಭೀರ ಪ್ರಕರಣವಾಗಿದೆ. ಹೀಗಾಗಿ ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿರುವುದಾಗಿ ನ್ಯಾಯಾಲಯ ತಿಳಿಸಿದೆ.
ಮೇ 3ರಂದು ನಗರದಲ್ಲಿ ಸಿಇಎನ್ ಪೊಲೀಸರು ದಾಳಿ ನಡೆಸಿ, ರೆಮ್ಡಿಸಿವಿರ್ ಕಾಳಸಂತೆಕೋರರನ್ನು ಬಲೆಗೆ ಕೆಡವಿದ್ದರು. 11 ಜನರನ್ನು ಬಂಧಿಸಿ, ಆರೋಪಿಗಳಿಂದ 14 ಇಂಜೆಕ್ಷನ್ ವಶಪಡಿಸಿಕೊಳ್ಳಲಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡಿದ್ದ ಪೊಲೀಸರು 11 ಜನರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಇಂದು ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿಗಳು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಸರ್ಕಾರದ ಪರವಾಗಿ ಎಪಿಪಿ ಮಹೇಶ್ ಪಾಟೀಲ್ ವಾದ ಮಂಡಿಸಿದ್ದರು.