– ಎಸ್ಐಟಿ ವಶಕ್ಕೆ ಪಡೆದವರು ನನಗೆ ಸಿಡಿ ಕೊಟ್ಟಿಲ್ಲ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ಪಬ್ಲಿಕ್ ಟಿವಿಗೆ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ದಿನೇಶ್ ಕಲ್ಲಹಳ್ಳಿ, ನಿನ್ನೆ ವಿಚಾರಣೆ ನಡೆಸಿದವರಲ್ಲಿ ಓರ್ವ ಮಾತ್ರ ಪರಿಚಯ. ಆದ್ರೆ ಅವನು ನನಗೆ ಸಿಡಿ ತಂದು ಕೊಟ್ಟಿಲ್ಲ. ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ನೀಡಿದ ದೂರು ಹಿಂಪಡೆದುಕೊಂಡಿದ್ದೇನೆ. ಸದ್ಯಕ್ಕೆ ಪ್ರಕರಣಕ್ಕೂ ನಗಗೂ ಸಂಬಂಧ ಇಲ್ಲ. ಎಸ್ಐಟಿ ಈವರೆಗೆ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿಲ್ಲ. ಒಂದು ವೇಳೆ ನೋಟಿಸ್ ನೀಡಿದ್ರೆ ವಿಚಾರಣೆಗೆ ಹಾಜರಾಗುತ್ತೇನೆ ಎಂದು ಹೇಳಿದರು.
ಮಾಜಿ ಸಚಿವರ ರಾಸಲೀಲೆ ಪ್ರಕರಣದ ಕುರಿತು ತನಿಖೆಗೆ ಒತ್ತಾಯಿಸಿ ದಿನೇಶ್ ಕಲ್ಲಹಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಅದೇ ದಿನ ಸೋಶಿಯಲ್ ಮೀಡಿಯಾದಲ್ಲಿ ಮಾಜಿ ಮಂತ್ರಿಗಳ ವೀಡಿಯೋ ವೈರಲ್ ಆಗಿತ್ತು. ಆದ್ರೆ ದಿನೇಶ್ ಕಲ್ಲಹಳ್ಳಿ ದಿಢೀರ್ ಅಂತ ತಾವು ಸಲ್ಲಿಸಿದ ದೂರು ಹಿಂಪಡೆದುಕೊಳ್ಳುವ ಮೂಲಕ ಯೂ ಟರ್ನ್ ತೆಗೆದುಕೊಂಡಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಸೌಮೆಂದು ಮುಖರ್ಜಿ ನೇತೃತ್ವದಲ್ಲಿ ಮಧ್ಯಾಹ್ನ 2ಕ್ಕೆ ಎಸ್ಐಟಿ ರಚನೆ ಮಾಡಲಾಗಿತ್ತು. ಎಸ್ಐಟಿ ರಚನೆಯಾದ ಎರಡು ಗಂಟೆಯಲ್ಲಿ ಇಬ್ಬರು ಸಿಡಿಗೇಡಿಗಳು ವಶಕ್ಕೆ ಪಡೆಯಲಾಯ್ತು. ಬೆಂಗಳೂರಿನಲ್ಲಿ ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿದ ಅಧಿಕಾರಿಗಳು ಇಬ್ಬರನ್ನ ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಇಬ್ಬರನ್ನ ನಾಲ್ಕು ಗಂಟೆಗಳ ಕಾಲು ಆರು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ.
ಎಸ್ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್ಐಟಿ ಬಲೆ ಬೀಸಿತ್ತು. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನ ವಶಕ್ಕೆ ಪಡೆಯಲಾಗಿದೆ. ಕೇವಲ ಆರು ಗಂಟೆಗಳಲ್ಲಿ ಐವರ ಆಪರೇಷನ್ ಮುಗಿಸಿದೆ. ಸದ್ಯ ಐವರು ಸಿಡಿಗೇಡಿಗಳ ಪೈಕಿ ನಾಲ್ವರಷ್ಟೇ ಎಸ್ಐಟಿ ವಶದಲ್ಲಿದ್ದು, ಒಬ್ಬರನ್ನು ವಿಚಾರಣೆ ಮಾಡಿ ಷರತ್ತಿನ ಮೇರೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.